ತಕಿಟ ತಕಿಟ ಧೋಂ

Tuesday, February 22, 2011

ಕೋರ್ಟಿನಲ್ಲಿ ಕಾಫ್ಕನ ನೆನಪು

ಕೋರ್ಟಿನಲ್ಲಿ ಕಾಫ್ಕನ ನೆನಪು

ಇತ್ತೀಚಿನ ದಿನಗಳಲ್ಲಿ ಮಂಗಳೂರಿನತ್ತ ನನ್ನ ಪ್ರಯಾಣ ಹೆಚ್ಚಾಗುತ್ತಿದೆ. ಈ ಬಾರಿ ಮತ್ತೊಮ್ಮೆ ಅಲ್ಲಿಗೆ ಮನಸ್ಸಿಲ್ಲದಿದ್ದರೂ ಹೋಗಬೇಕಾಯಿತು. ನಕಲಿ ಅಂಕಪಟ್ಟಿ ತಯಾರಕರನ್ನು ೨೦೦೬ರಲ್ಲಿ ಪೋಲಿಸರು ಹಿಡಿದಿದ್ದರು. ಆ ನಕಲಿ ಅಂಕಪಟ್ಟಿಯಲ್ಲಿ ಮಂಗಳೂರಿನ ಎಲ್ಲಾ ಕಾಲೇಜಿನ ಮುದ್ರೆಗಳೂ ಇದ್ದವು. ಆ ಕುರಿತು ತನಿಖೆಗಾಗಿ ನನ್ನ ಕಾಲೇಜಿಗೆ ಬಂದಾಗ ನಾನು ಅದು ಹೇಗೆ ನಕಲಿ ಎಂದು ವಿವರಿಸಿ ಲಿಖಿತ ಹೇಳಿಕೆ ಕೊಟ್ಟಿದ್ದೆ. ಐದು ವರುಷಗಳ ನಂತರ ಆರೋಪಿಗಳೂ, ಹೇಳಿಕೆ ಕೊಟ್ಟ ನಾವು ಕೋರ್ಟಿಗೆ ಹಾಜರಾಗಬೇಕಾಗಿದೆ. ಈ ಸಂದರ್ಭದಲ್ಲಿ ಕಾಪ್ಕನ ನೆನಪು ತುಂಬಾ ಆಗುತ್ತದೆ. ಅವನ ಕಾದಂಬರಿಯ ನಾಯಕನೊಬ್ಬನಿಗೆ ಬೆಳಿಗ್ಯೆ ಅಕಾರಣವಾಗಿ ಪೋಲಿಸ್ ಸ್ಟೇಶನ್ ಗೆ ಕರೆಯಿಸಿ ಅಲ್ಲಿಯೇ ಕುಳ್ಳಿರಿಸುತ್ತಾರೆ. ಅವನ ಅಪರಾಧವನ್ನಾಗಲೀ, ಕರೆಯಿಸಿದ ಕಾರಣವನ್ನಾಗಲೀ ತಿಳಿಸುವುದೇ ಇಲ್ಲ. ಸಂಜೆಯವರೆಗೆ ಆತ ನರಕ ಯಾತನೆಯನ್ನು ಅನುಭವಿಸುತ್ತಾನೆ. ಅದನ್ನು ಓದುತ್ತಿರುವಾಗ ಕಥಾನಾಯಕನ ತೊಳಲಾಟ ಅರ್ಥವಾಗಿರಲಿಲ್ಲ. ಈಗ ಅನುಭವಕ್ಕೆ ಬಂದಿತು. ಹತ್ತೂವರೆಗೆ ಹಾಜರಾಗಬೇಕು-ಸರ್ಕಾರಿ ವಕೀಲರ ಬಳಿ. ಹನ್ನೊಂದು ಘಂಟೆಗೆ ಕೋರ್ಟ್ ಪ್ರಾರಂಭವಾದಾಗ ನಮ್ಮ ಹೆಸರನ್ನು ಕರೆದಾಗ ಹಾಜರಾತಿ ನೀಡಬೇಕು. ಮತ್ತೆ ಕಾಯಬೇಕು, ಕಾಯಬೇಕು. ಮೇರಾ ನಂಬರ್ ಕಬ್ ಆಯೇಗಾರೇ ಎಂದು. ಅದು ಘಂಟೆ ಒಂದೂ ಆಗಬಹುದು, ಎರಡೂ ಆಗಬಹುದು. ಈ ಬಾರಿ ಅದು ಹಾಗೆಯೇ ಆಯಿತು. ಈ ಬಾರಿಯೂ ಹೇಳಿಕೆ ನೀಡಲಾಗಲಿಲ್ಲ. ಮತ್ತೊಮ್ಮೆ ಕರೆಯಿಸಿಕೊಳ್ಳುತ್ತಾರಂತೆ. ಮೇಯಲ್ಲಿ. ಪ್ರಾಮಾಣಿಕವಾಗಿ ಹೇಳಿಕೆ ಕೊಟ್ಟು ಈಗ ಇದು ನನಗೆ ಬೇಕಾಗಿತ್ತಾ ಎಂದು ಪರಿತಪಿಸುತ್ತಿದ್ದೇನೆ.

ಕಳೆದ ಶನಿವಾರ ತುಂಬಾ ದಿನಗಳಿಂದ ಕಾಯುತ್ತಿದ್ದ ದಿನ ಬಂದಿತು. ತುಂಗಾ ಮಹೋತ್ಸವ. ತೀರ್ಥಹಳ್ಳಿಯವನಾದ ಶ್ರೀ ಉದಯಕುಮಾರ್ ಶೆಟ್ಟಿ ಈಗ ಬೆಂಗಳೂರಿನಲ್ಲಿ ಕಲಾತೀರ ಎಂಬ ನಾಟ್ಯಾಲಯವನ್ನು ಸ್ಥಾಪಿಸಿ ನೃತ್ಯವನ್ನು ಕಲಿಸಿಕೊಡುತ್ತಿದ್ದಾನೆ. ದಿ.ಪ್ರೊತಿಮಾ ಬೇಡಿಯ ಶಿಷ್ಯನೀತ. ಊರಿನ ಬಗ್ಗೆ ಅತಿಯಾದ ಮೋಹ. ಹಾಗಾಗಿ ಎರಡು ವರ್ಷಕ್ಕೊಮ್ಮೆ ಊರಿನ ನದೀತೀರದಲ್ಲಿ ರಾತ್ರಿ ೭ರಿಂದ ಬೆಳಿಗ್ಯೆ ಆರರವರೆಗೆ ಸಂಗೀತ ನೃತ್ಯ ಕಾರ್ಯಕ್ರಮವನ್ನು ತುಂಗಾ ಮಹೋತ್ಸವವೆಂಬ ಹೆಸರಿನಲ್ಲಿ ನಡೆಸುತ್ತಿದ್ದಾನೆ. ಈ ಬಾರಿ ತುಂಗಾ ಕಾಲೇಜಿನಲ್ಲಿ ಒಂದು ವಿಚಾರ ಗೋಷ್ಟಿಯನ್ನೂ ಏರ್ಪಡಿಸಿದ್ದ. ಚರ್ಮವಾದ್ಯಗಳು ಮತ್ತು ಈಗ ಪ್ಲಾಸ್ಟಿಕ್ ವಾದ್ಯಗಳು, ನೃತ್ಯದ ಸಂಪ್ರದಾಯಿಕ ಶೈಲಿ ಮೊದಲಾದ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ ಇತ್ತು. ಶ್ರೀ. ಎಸ್.ಎಸ್.ಚಂದ್ರಶೇಖರ್, ಪ್ರೊ.ಕೆ.ರಾಮಮೂರ್ತಿರಾವ್, ಶ್ರೀಮತಿ ಪೂರ್ಣಿಮಾ ಗುರುರಾಜ್, ಮೊದಲಾದವರು ಭಾಗವಹಿಸಿದ್ದರು. ಶ್ರೀ ಸುಬ್ರಾಯ ಚೊಕ್ಕಾಡಿಯವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯೂ ಇತ್ತು. ಸಮಾರಂಭ ಗಂಟೆಯಷ್ಟು ತಡವಾಗಿ ಪ್ರಾರಂಭವಾದುದ್ದರಿಂದ ರೈಲು ಹಳಿತಪ್ಪಿದಂತಾಗಿತ್ತು. ಕಾರ್ಯಕ್ರಮಗಳಿಗೆ ವಿರಾಮ ನೀಡದೇ ಮೂರರವರೆಗೆ ನಡೆಸಿದರು. ಸಭೆಯಲ್ಲಿ ಜನರೂ ಕಡಮೆಯಿದ್ದರು. ಕಾಲೇಜಿನ ಮಕ್ಕಳೂ ರಜೆಯನ್ನು ಚೆನ್ನಾಗಿಯೇ ಅನುಭವಿಸಿದರು. ಈ ಹಿರಿಯರ ಮಾತುಗಳನ್ನು ಕೇಳುವ ಅವಕಾಶವನ್ನು ಕಳೆದುಕೊಂಡರು.

ಸಂಜೆಯೆನ್ನುವಾಗ ನಮ್ಮ ರಥಬೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಬೀದಿಯೆಲ್ಲಾ ಗಲಗಲ. ಜನರ ಓಡಾಟ, ಸಂಭ್ರಮ. ರಾತ್ರಿಯಾಗುತ್ತಲೇ ಎಲ್ಲರ ಗಮನ ನದೀತೀರದತ್ತ. ಯಾರ ಮುಖ ನೋಡಿದರೂ ಗುರುತು ಸಿಗುತ್ತಿರಲಿಲ್ಲ. ರಾತ್ರಿಯ ಚಳಿಯನ್ನು ಎದುರಿಸಲು ಮೈತುಂಬಾ ಬಟ್ಟೆಗಳು, ಮಂಕಿಕ್ಯಾಪ್, ಇತ್ಯಾದಿ. ಮಂಗಳೂರಿನಿಂದ ನನ್ನ ಗೆಳೆಯರಾದ ಮಹಾಲಿಂಗಭಟ್ಟರು, ಅವರ ಗೆಳೆಯರಾದ ಶ್ರೀ ರೋಷನ್, ಮಹಾಲಿಂಗರ ಮಗ ಚಕಿತ ಬಂದಿದ್ದರು. ಕಳಸದಿಂದ ನನ್ನ ಶಿಷ್ಯ ಅರವಿಂದ ಬಂದಿದ್ದ. . ಮಾತುಕತೆಗೆ ಸುಬ್ರಾಯ ಚೊಕ್ಕಾಡಿಯವರೂ ಸಿಕ್ಕಿದ್ದರು, ಮನೆಯಲ್ಲಿ ಒಂದಿಷ್ಟು ಮಾತಾದ ನಂತರ, ಹೋಟೆಲಿನಲ್ಲಿ ಜತೆಯಲ್ಲಿ ಊಟ. ಒಟ್ಟಾಗಿ ಊಟಮಾಡಿದ ನಂತರ ರಾತ್ರಿಯ ಚಳಿಯನ್ನು ಎದುರಿಸಲು ಸರ್ವಸನ್ನದ್ಧರಾಗಿ ನದೀತೀರದತ್ತ ನಡೆದವು. ಬೀದಿತುಂಬಾ ಜನ. ಮರಳುಗುಡ್ಡೆಯಲ್ಲಿ ಕಿಕ್ಕಿರಿದ ಜನ. ಜಾತ್ರೆಯ ಹಾಗೆ ಅಲ್ಲಲ್ಲಿ ತಿಂಡಿತಿನಿಸುಗಳ ಅಂಗಡಿಗಳು. ತಂಪಾಗಿ ಬಹಳ ಸಂಭ್ರಮದಿಂದ ನದಿ ಹರಿಯುತ್ತಿತ್ತು ತನ್ನ ಪಾಡಿಗೆ. ಬಣ್ಣದ ಕಾಗದದ ದೋಣಿಗಳು ನದಿಯ ಮೇಲೆ ತೇಲುತ್ತಿದ್ದವು. ದಡದ ಎರಡೂ ಕಡೆಗಳಲ್ಲಿರುವ ಮರಗಿಡಗಳಿಗೆಲ್ಲಾ ಸೀರಿಯಲ್ ಲೈಟಿನ ಅಲಂಕಾರ. ಸೇತುವೆಯ ಕಮಾನುಗಳ ಮೇಲೂ ಅಲಂಕಾರ. ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು. ಕಾರ್ಯಕ್ರಮ ಪ್ರಾರಂಭವಾದಾಗ ಜನರ ಮಾತುಕತೆಯಿಂದಾಗಿ ಸಂಗೀತ ಕೇಳಲು ಕಷ್ಟವಾಗುತ್ತಿತ್ತು. ನಾವು ನಿಧಾನವಾಗಿ ರಂಗಸ್ಠಳದ ಹಿಂದೆ ಇರುವ ಬಂಡೆಯನ್ನು ಆಶ್ರಯಿಸಿದೆವು. ಅಲ್ಲಿಯೇ ಹಾಕಿದ್ದ ದೊಡ್ದ ಎಲ್ಸಿಡಿ ಸ್ಕ್ರೀನ್ ನಿಂದ ಎಲ್ಲವೂ ನೋಡಲು ಸಾಧ್ಯವಾಗುತ್ತಿತ್ತು.
ಕಲಾತೀರದ ವಿದ್ಯಾರ್ಥಿಗಳಿಂದ ಓಡಿಸಿ ನೃತ್ಯದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ವೆಂಕಟೇಶ್ ಕುಮಾರ್ ರಿಂದ ಸುಗಮ ಸಂಗೀತ. ಹೊಸತೇನೂ ಇರಲಿಲ್ಲ. ಕೇಳಿದ ಹಾಡುಗಳೇ. ಪ್ರತಿಯೊಂದು ತಂಡಕ್ಕೂ ಸುಮಾರು ಅರ್ಧಗಂಟೆಯ ಕಾಲಾವಕಾಶ ದೊರೆಯುತ್ತಿತ್ತು. ಶ್ರೀಲಂಕಾ, ನೇಪಾಳದ ನೃತ್ಯ ಕಾರ್ಯಕ್ರಮವಿತ್ತು. ಇದರಲ್ಲೂ ವಿಶೇಷತೆ ಇರಲಿಲ್ಲ. ಅವರವರ ಭಾಷೆಗಳಲ್ಲಿ ಹಾಡುಗಳಿದ್ದವು. ಹೊರತು ನೃತ್ಯದ ಗತಿ ನಮ್ಮ ಹಾಗೆ. ನಮ್ಮ ಹುಡುಗರೂ ನೃತ್ಯ ಮಾಡಬಹುದು. ಮಂಗಳೂರಿನ ಉಲ್ಲಾಳ ಮೋಹನ್ ರವರ ತಂಡದವರ ಸಪ್ತ ಮಾತೃಕೆ ನೃತ್ಯ ರೂಪಕ ಚೆನ್ನಾಗಿಯೇ ಮೂಡಿಬಂದಿತು. ನಿಜವಾದ ರಂಗು ಏರಿದ್ದು ಗಂಟೆ ಒಂದರ ನಂತರ. ಆ ವೇಳೆಯಲ್ಲಿ ಚಳಿಯನ್ನು ಎದುರಿಸಲಾರದೇ ಊರಿನ ಜನ ಮನೆಗೆ ತೆರಳಿದ್ದ ಕಾರಣ ಮುಂದಿನ ಕುರ್ಚಿಗಳೆಲ್ಲಾ ಖಾಲಿ ಖಾಲಿ. ಮರಗಳ ಹತ್ತಿರ ಹೋದರೆ ಮಳೆಯ ಹಾಗೆ ತಲೆಯ ಮೇಲೆ ಬೀಳುವ ಇಬ್ಬನಿಯ ಹನಿಗಳು. ಕುರ್ಚಿಯ ಮೇಲೆ ನೀರು ಚೆಲ್ಲಿದಂತೆ ಇದ್ದ ಇಬ್ಬನಿಯ ನೀರು, ತಂಪಾಗಿ ಬೀಸುವ ಗಾಳಿ . ನಮಗೂ ಆ ಚಳಿಯನ್ನು ಎದುರಿಸಲು ಕಷ್ಟವಾಗುತ್ತಿತ್ತು. ಒಟ್ಟು ನಾಲ್ಕು ಬಾರಿ ಬಿಸಿ ಚಹಾ ಕುಡಿದು ಹಠಹಿಡಿದು ಕುಳಿತುಕೊಂಡಿದ್ದೆವು. ಬೆಂಗಳೂರಿನ ಮುದ್ದುಮೋಹನರ ಹಿಂದೂಸ್ತಾನಿ ಸಂಗೀತ, ಉನ್ನಿಕೃಷ್ಣನ್ ರ ಸಂಗೀತ ಬಹಳವಾಗಿ ಮನಸ್ಸಿಗೆ ಖುಶಿಯನ್ನು ತಂದುಕೊಟ್ಟಿತು. ಉನ್ನಿ ಹಾಡಲು ಕುಳಿತಾಗ ಗಂಟೆ ಮೂರು, ಚಳಿಯೂ ಜೋರು, ಮೂರು ಹಾಡನ್ನು ಹಾಡಿದ ಬಳಿಕ, ಮಪ್ಲರನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದರೂ ಸಹ, ನಾಲ್ಕನೆಯ ಹಾಡು ಹೇಳುವಾಗ, ಚಳಿಗಾಳಿಯನ್ನು ಕುಡಿದ ಉನ್ನಿಗೆ ಹಾಡು ಹೇಳಲು ಕಷ್ಟವಾಯಿತು. ಹೇಗೋ ಮುಗಿಸಿದರು. ಚೆನ್ನೈನ ಉಮಾಶಂಕರರ ಘಟವಾದ್ಯ ಮೇಳ ಮಾತ್ರ ಎಲ್ಲರನ್ನು ಬಡಿದೆಬ್ಬಿಸಿತು. ಈ ಮನುಷ್ಯನಿಗೆ ಮಾತ್ರ ಚಳಿ ತಾಗಲೇ ಇಲ್ಲ. ಘಟವನ್ನು ಎತ್ತಿ ಹಾರಿಸಿ, ಕುಟ್ಟಿ ಕುಟ್ಟಿ ಹೊಡೆಯುತ್ತಿದ್ದ ಈತ ಮುಂದಿನ ಸಾಲಿನ ಹುಡುಗರಿಗೆ ಕುಣಿಯುವಂತೆ ಮಾಡಿಬಿಟ್ಟ. ಒರಿಸ್ಸಾದ ಗೋಟ್ಟೀಪೋವಾ ನೃತ್ಯವೂ ಹೀಗೆ ಮನಸ್ಸನ್ನು ರಂಜಿಸುತ್ತಿತ್ತು. ಈ ನೃತ್ಯದ ವಿಶೇಷತೆ ಎಂದರೆ ನೃತ್ಯಮಾಡುವವರೆಲ್ಲರೂ ಹುಡುಗರೇ. ರಾತ್ರೆ ನಾಲ್ಕರವೇಳೆ ಕೂಚುಪುಡಿ ಯಕ್ಷಗಾನ ಪ್ರಾರಂಭವಾಯಿತು. ಭಾಷೆ ತೆಲಗುವಾದದ್ದರಿಂದ ಅರ್ಧ ಅರ್ಥವಾಗುತ್ತಿತ್ತು. ಸುಮ್ಮನೇ ನೃತ್ಯವನ್ನು ನೋಡುತ್ತಾ ಕುಳಿತೆವು. ಕೊನೆಯದಾಗಿ ಬೆಂಗಳೂರಿನ ಕೃಪಾಫಡ್ಕೆಯವರಿಂದ ವಂದೇ ಮಾತರಂ ರೂಪಕ. ಅದು ಮುಗಿಯುವಾಗ ಬೆಳಿಗ್ಯೆ ಆರೂ ಹತ್ತು. ನಿಧಾನವಾಗಿ ಬೆಳಕು ಮೂಡಲು ಪ್ರಾರಂಭವಾಗಿತು. ಕೊನೆಯ ಚಹಾವನ್ನು ಕುಡಿದು ನಿಧಾನವಾಗಿ ಮನೆಯತ್ತ ಹೊರಟೆವು. ನಾನು ಮತ್ತು ಶಿಷ್ಯ ಅರವಿಂದ ರಾತ್ರಿಯಿಡೀ ನಿದ್ದೆ ಮಾಡಿರಲಿಲ್ಲ. ನಮ್ಮ ಮಹಾಲಿಂಗ ಮತ್ತು ಚಕಿತ ಬಂಡೆಯಮೇಲೆ ಒಂದುಗಂಟೆ ಮಲಗಿಕೊಂಡಿದ್ದರು. ಆದರೂ ಆಯಾಸವಿರಲಿಲ್ಲ.

ಊರಿನಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವುದು ಬಹಳ ವಿರಳ. ಆದ್ದರಿಂದ ಊರಿನ ಅಂಗಳದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಪೂರ್ಣವಾಗಿ ದಕ್ಕಿಸಿಕೊಳ್ಳಬೇಕು ಎಂಬ ಹಟವಿದೆ ನನಗೆ. ಮೊನ್ನೆ ದಿನಾಂಕ ೧೪ರಂದು ಮಾರಿಗುಡಿಯ ಅಂಗಳದಲ್ಲಿ ಗದಾಯುದ್ಧವೆಂಬ ಯಕ್ಷಗಾನ ಪ್ರಸಂಗವಿತ್ತು. ಸಂಜೆ ಏಳಕ್ಕೆ ಎಂದು ಘೋಷಿಸಿದ್ದರೂ ಕೂಡ ಊರಿನ ಸಂಪ್ರದಾಯದಂತೆ ಒಂದು ಗಂಟೆ ಇಪ್ಪತ್ತು ನಿಮಿಷದಷ್ಟೇ ತಡವಾಗಿ ಪ್ರಾರಂಭವಾಯಿತು. ನಾವು ಶಿಸ್ತಾಗಿ ಏಳು ಗಂಟೆಗೆ ಸಭೆಯಲ್ಲಿ ಕುಳಿತಿದ್ದೆವು. ಯಕ್ಷಗಾನವೇನೊ ಚೆಂದವಾಗಿ ಬಂದಿತು. ಆದರೆ ಹೆಚ್ಚುಹೊತ್ತು ಕುಳಿತುಕೊಳ್ಳಲಾಗಲಿಲ್ಲ. ಇಂತಹದೇ ಅನುಭವ ಮೊನ್ನೆ ತಾ.೧೯ರಂದು ಆಯಿತು. ಉತ್ತರ ಕರ್ನಾಟಕದ ಲೇಖಕಿಯರ ಮತ್ತು ವಾಚಕಿಯರ ಸಂಘದವರು ತಮ್ಮ ಸಂಘದ ರಜತೋತ್ಸವವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ಅದರಂತೆ ಅವರು ಅಂದು ಕುಪ್ಪಳ್ಳಿಗೆ ಬಂದಿದ್ದರು. ಆದಿನ ಮಧ್ಯಾಹ್ನ ಕಾವ್ಯದ ಕುರಿತು ಚರ್ಚೆಯನ್ನು ಇಟ್ಟುಕೊಂಡಿದ್ದರು. ಶಿವಮೊಗ್ಗದಿಂದ ತೀ.ನಂ.ಶಂಕರನಾರಾಯಣರು ಮತ್ತು ಕುಮಾರ ಚಲ್ಯರೂ ಹನ್ನೊಂದು ಘಂಟೆಗೆ ಕುಪ್ಪಳಿಗೆ ಬಂದಿದ್ದರು. ನನಗೆ ಪ್ರೊ.ಎಲ್.ಸಿ.ಸುಮಿತ್ರಾ ಒತ್ತಾಯಪೂರ್ವಕ ಆಹ್ವಾನ ನೀಡಿದ್ದರಿಂದ ನಾನೂ ಅಲ್ಲಿಗೆ ಎರಡು ಗಂಟೆಗೆ ಹೋಗಿದ್ದೆ. ಆದರೆ ಧಾರವಾಡದಿಂದ ಹೊರಟ ಬಸ್ಸು ಮಾತ್ರ ಬಂದೇ ಇರಲಿಲ್ಲ. ಅವರಿಗೆ ಯಾರಿಗೆ ಫೋನ್ ಮಾಡಿದ್ದರೂ ಎಲ್ಲರೂ ಔಟ್ ಆಫ್ ರೀಚ್ ಎಂದೇ ಸಂದೇಶ ಬರುತ್ತಿತ್ತು. ಕೊನೆಗೆ ಅವರು ಬಂದಾಗ ಘಂಟೆ ನಾಲ್ಕು. ಅಂತೂ ಇಂತೂ ನಾಲ್ಕೂವರೆಗೆ ಕಾರ್ಯಕ್ರಮ ಪ್ರಾರಂಭವಾಯಿತು.ಪಂಚಾಕ್ಷರಿ ಹಿರೇಮಠ, ಮಾಲತಿ ಪಟ್ಟಣ ಶೆಟ್ಟಿ, ಸುನಂದ ಕಡಮೆ, ಗೀತಾ ನಾಗಭೂಷಣ, ಸುಮಿತ್ರಾ ಹಲವಾಯಿ ಮೊದಲಾದವರು ಬಂದಿದ್ದರು. ಯಾರ ಮಾತೂ ಕೇಳಲು ಸಾಧ್ಯವಾಗಲಿಲ್ಲ. ವಿಶೇಷ ಆಹ್ವಾನಿತರಾಗಿ ಬಂದಿದ್ದ ಪ್ರೊ.ತೀನಂಶಂಕರನಾರಯಣರು ಪ್ರಾರಂಭದಲ್ಲಿ ಮಾಡಿದ ಉಪನ್ಯಾಸ ಬಹಳ ದೀರ್ಘವಾಯಿತು. ಪಂಪನಿಂದ ಕುವೆಂಪುವರೆಗಿನ ಕಾವ್ಯದ ಕುರಿತು ಮಾತನಾಡುತ್ತಿದ್ದಂತೆ ಘಂಟೆ ಆರಾಗಿತ್ತು. ನಾನು ಅಲ್ಲಿಂದ ಹೊರಟೆ. ಮಾರನೇಯ ದಿನ ಕವಿಗೋಷ್ಠಿ ಇದ್ದರೂ ಹೋಗಲಿಲ್ಲ.

ಮತ್ತೆ ಊರು ತಣ್ಣಗಾಗಿದೆ. ಎಡೆಬಿಡದೆ ನಡೆದ ಕಾರ್ಯಕ್ರಮಗಳಿಗೆ ಬಿಡವು ಸಿಕ್ಕಿದೆ. ಮತ್ತೆ ಯಾವ ಹೊಸ ಕಾರ್ಯಕ್ರಮನಡೆಯಬಹುದು ಎಂದು ಕಾಯುತ್ತಾ ಕುಳಿತಿದ್ದೇನೆ. ಮೈ ಕೊರೆಯುತ್ತಿದ್ದ ಚಳಿ ಶಿವರಾತ್ರಿ ಹತ್ತಿರ ಬರುತ್ತಿದ್ದಂತೆ ಕಡಮೆಯಾಗುತ್ತಿದೆ ಅಂದರೆ ತಡೆದುಕೊಳ್ಳಬಹುದಾದ ಚಳಿ ಇದೆ.

ವಾರದ ಓದು:೧. ರಾಗ ವೈಭವ:ವಾಸುದೇವ ಮೂರ್ತಿ, ಅನು: ಲಲಿತಾ ಶಾಸ್ತ್ರಿ ಮತ್ತು ಸಾವಿತ್ರಿ ಭಾಸ್ಕರ್ (೧೦೮). ೨ ಕಿಲಿಮಂಜರೋ-ತಾಜಾ ತಾನ್ಜಾನಿಯಾ-ಪ್ರಶಾಂತ್ ಬೀಚಿ(೮೦), ೩. ಒಂದೊಂದು ಮುಖದ ಒಂದೊಂದು ಮುಖ- ನಾದಾ (೧೦೯), ೪. ತಂಪು ನೆಳಲು-ಛಾಯಾಪತಿ (೧೬೯).

Monday, February 7, 2011

ಸಂಗೀತ-ಸಾಹಿತ್ಯದ ಗುಂಗಿನಲ್ಲಿ.

ಸಂಗೀತ-ಸಾಹಿತ್ಯದ ಗುಂಗಿನಲ್ಲಿ.

ಕಳೆದ ಶನಿ ಮತ್ತು ಭಾನುವಾರ ನನ್ನೂರಿನ ಸುಮುಖ ಸಂಗೀತ ಶಾಲೆಯವರ ವಾರ್ಷಿಕೋತ್ಸವ ವೆಂಕಟರಮಣ ದೇವಾಲಯದ ಅಂಗಳದಲ್ಲಿ ಮತ್ತು ಶ್ರೀ ರಾಮಮಂದಿರದ ಹತ್ತಿಲಲ್ಲಿ ನಡೆಯಿತು. ವರ್ಷಕ್ಕೊಮ್ಮೆ ತನ್ನೆಲ್ಲಾ ವಿದ್ಯಾರ್ಥಿಗಳಿಗೆ ಹಾಡಲು ಅವಕಾಶ ಮಾಡಿಕೊಡುವುದಲ್ಲದೆ ಕೆಲವು ನುರಿತ ಗಾಯಕರನ್ನು ಕರೆಯಿಸಿ ಅವರಿಂದ ಸಂಗೀತ ಕಚೇರಿ ಮಾಡಿಸುವುದು ಸಂಪ್ರದಾಯ. ಹೀಗಾಗಿ ಶನಿವಾರ ಸಂಜೆ ಪುದಿಕೋಟೆ ರಾಮನಾಥನ್ ರವರ ವಯೋಲಿನ್ ಕಚೇರಿ ಇತ್ತು. ಬಹಳ ದಿನಗಳನಂತರ ಒಂದು ಅದ್ಭುತವಾದ ಕಚೇರಿಯನ್ನು ಕೇಳಿದಂತಾಯಿತು. ಮಾರನೆಯದಿನ ಕೊಪ್ಪದ ಒಬ್ಬಳು ಸಣ್ಣ ಹುಡುಗಿ -ಸ್ವಾದಿನಿ-ಬಹಳ ಚೆನ್ನಾಗಿ ಹಾಡಿದಳು. ಪ್ರಾಯದಲ್ಲಿ ಬಹಳ ಸಣ್ಣವಳು. ಲಂಗ ಹಾಕಿಕೊಂಡಿದ್ದಳು. ಆದರೆ ನುರಿತ ಗಾಯಕಿಯಂತೆ ಬಹಳ ಚೆನ್ನಾಗಿಯೇ ಹಾಡಿದಳು. ಇವೆರೆಡೂ ಸಂಗೀತ ಕಚೇರಿಗಳಿಂದ ಮನಸ್ಸಿಗೆ ಬಹಳ ಸಂತೋಷವಾಯಿತು.
ನನ್ನೂರಿನಲ್ಲಿ ಮಂಗಳವಾದ್ಯ ನುಡಿಸುವವರ ಸಂಘವೆಂಬ ಸಂಘವಿದೆ. ಇವರೆಲ್ಲರೂ ಕೂದಲು ಕತ್ತರಿಸುವ ವೃತ್ತಿಯನ್ನು ಮಾಡುವವರು. ಆದರೆ ನಾಗಸ್ವರ ನುಡಿಸುವುದರಲ್ಲಿ ತುಂಬಾ ಪರಿಣತಿಯನ್ನು ಪಡೆದಿದ್ದಾರೆ. ಇವತ್ತಿನ ದಿನಗಳಲ್ಲಿ ಶುದ್ಧ ನಾಗಸ್ವರವನ್ನು ಕೇಳುವ ಮತ್ತು ನುಡಿಸುವವರು ಬಹಳ ಕಡಮೆಯಾಗಿದ್ದಾರೆ . ವರ್ಷದಲ್ಲಿ ಒಂದು ದಿನ ಪುರಂದರ ಮತ್ತು ತ್ಯಾಗಾರಾಜರ ಸ್ಮರಣೆಯೆಂಬ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಡೆಸುತ್ತಾರೆ. ಶುಭ್ರವಾದ ಬಿಳಿ ಬಟ್ಟೆಯನ್ನು ಹಾಕಿಕೊಂಡು ಸಂಭ್ರಮದಿಂದ ನಡೆಯುವ ಅವರನ್ನು ನೋಡುವುದೇ ಒಂದು ಸೊಗಸು. ಇವರೆಲ್ಲರೂ ನಮಗೆ ಚಿಕ್ಕಂದಿನಿಂದಲೇ ಪರಿಚಿತರು. ಪ್ರಾರಂಭದಲ್ಲಿ ಶುದ್ಧ ನಾಗಸ್ವರ ಕಚೇರಿ. ಸ್ಠಳೀಯ ಕಲಾವಿದರಿಂದ. ಹಿರಿಯರಿಂದ ಕಲಿತದ್ದನ್ನು ಕಿರಿಯರು ಪ್ರಸ್ತುತ ಪಡಿಸುತ್ತಾರೆ. ಒಂದು ರೀತಿಯ ಅರಂಗೇಟ್ರಂ ಇದ್ದಹಾಗೆ. ಪುರಂದರದಾಸರ ಮತ್ತು ತ್ಯ್ರಾಗರಾಜರ ಕೃತಿಯನ್ನು ಪ್ರಸ್ತುತ ಪಡಿಸುತ್ತಾರೆ. ಅನಂತರ ಅರ್ಧಗಂಟೆಯ ಸಭಾಕಾರ್ಯಕ್ರಮ. ತಮ್ಮವರೇ ಆದರೆ ಪರಸ್ಠಳ ದಲ್ಲಿರುವ ಒಬ್ಬ ಕಲಾವಿದನಿಗೆ ಅವರು ಗೌರವಿಸುತ್ತಾರೆ. ಮಾತುಗಳಿರುವುದಿಲ್ಲ. ಕೇವಲ ಗೌರವ ಅರ್ಪಣೆ. ಹಾರ, ಹಣ್ಣು, ಶಾಲು. ಬಂದ ಅತಿಥಿಗಳು ಮಾತ್ರ ಮಾತನಾಡುತ್ತಾರೆ. ಈ ಬಾರಿ ಸಾಲಿಗ್ರಾಮದ ಒಬ್ಬರನ್ನು ಗೌರವಿಸಿದರು. ಊರಿನ ಸಂಗೀತ ಶಾಲೆಯ ಶಿಕ್ಷಕರಾದ ಶ್ರೀ ಚಿಂತಾಮಣಿ ನಾಗರಾಜ್ ಅರ್ಧಗಂಟೆ ಕರ್ನಾಟಕ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು. ಕೊನೆಯಲ್ಲಿ ಸನ್ಮಾನಿತರಾದವರಿಂದ ಸಂಗೀತ ಕಚೇರಿ. ಅವರು ಬಹಳ ಚೆನ್ನಾಗಿ ಸಾಕ್ಸೋಫೋನ್ ನ್ನು ನುಡಿಸಿದರಾದರೂ ಅಸಾಧ್ಯವಾದ ಚಳಿಯನ್ನು ತಡೆಯಲಾರದೇ ಮನೆಯಲ್ಲಿಯೇ ಕುಳಿತು ಕೇಳಬೇಕಾಯಿತು. ರಾಮೇಶ್ವರ ದೇವಸ್ಥಾನದ ರಥದಕೊಟ್ಟಿಗೆಯ ಅಂಗಳದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಇದು ಮೊನ್ನೆ ಮಂಗಳವಾರದ ದಿನ ನಡೆಯಿತು.

ನಿನ್ನೆ ಭಾನುವಾರ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರು ಊರಿಗೆ ಬಂದಿದ್ದರು ಮತ್ತು ಅವರೊಡನೆ ಒಂದು ಸಂವಾದ ಕಾರ್ಯಕ್ರಮ ಗಾಯತ್ರೀ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಸಿಕ್ಕ ಪ್ರಚಾರ ಕಡಮೆ. ಆದರೂ ಅಭೂತಪೂರ್ವವಾದ ಸ್ಪಂದನ ಕಾರ್ಯಕ್ರಮಕ್ಕೆ ಸಿಕ್ಕಿತು. ಅನುಮಾನದಿಂದಲೇ ಇನ್ನೂರಷ್ಟು ಹಾಕಿದ್ದ ಕುರ್ಚಿಗಳು ಸಾಲದೇ, ಅನಂತರ ಪೂರ್ಣ ಪ್ರಮಾಣದಲ್ಲಿ ಮತ್ತೆ ಕುರ್ಚಿಯನ್ನು ಹಾಕಬೇಕಾಯಿತು. ಸುಮಾರು ಆರು ನೂರು ಜನ ಸ್ವಯಂಪ್ರೇರಿತರಾಗಿ ಬಂದಿದ್ದರು. ಬಂದವರಿಗೆಲ್ಲರಿಗೂ, ಪ್ರಶ್ನೆಕೇಳಬಯಸುವವರೆಲ್ಲರಿಗೂ ಕಾಗದಗಳನ್ನು ಹಂಚಿ.ಅವುಗಳನ್ನು ಶಿಸ್ತಾಗಿ ಸಂಗ್ರಹಿಸುತ್ತಿದ್ದರು. ಶಿವಮೊಗ್ಗದ ನಿವೃತ್ತ ಪ್ರಾಚಾರ್ಯರಾದ ಪ್ರೊ.ಓಂಕಾರಪ್ಪನವರು ಪ್ರಸ್ತಾವಿಕ ಭಾಷಣವನ್ನು ಮಾಡಿ ಆದನಂತರ ಸುಮಾರು ಹತ್ತು ನಿಮಿಷ ಭೈರಪ್ಪನವರು ತಾನು ಪ್ರಶ್ನೆಗಳಿಗೆ ಉತ್ತರಿಸಲು ಹಾಕಿಕೊಂಡಿರುವ ನಿಬಂಧನೆಗಳನ್ನು ವಿವರಿಸಿದರು. ಒಂದೊಂದಾಗಿ ಪ್ರಶ್ನೆಗಳನ್ನು ಓದಿ ಉತ್ತರಿಸಲು ಪ್ರಾರಂಭಿಸಿದರು. ರಾಜಕೀಯದ ಪ್ರಶ್ನೆಗಳನ್ನು ಉತ್ತರಿಸಲು ಅವರು ನಿರಾಕರಿಸಿದರು. ಚರ್ಚಾಸ್ಪದವಾಗಬಹುದಾದ ಪ್ರಶ್ನೆಗಳನ್ನೂ ಅವರು ಉತ್ತರಿಸಲಿಲ್ಲ. ಉತ್ತರಗಳು ಸಂಕ್ಷಿಪ್ತವಾಗಿದ್ದವು. ನೇರವಾಗಿದ್ದವು. ಹಿತವಾಗಿದ್ದವು. ಕೇಳುಗರು ಅವರ ಉತ್ತರಗಳಿಗೆ ಸಮ್ಮತಿಸುವಂತೆ ಕರತಾಡನವನ್ನು ಮಾಡುತ್ತಿದ್ದರು. ನಿಶ್ಶಬ್ದವಾಗಿ ಸಭೆ ಸ್ಪಂದಿಸುತ್ತಿತ್ತು. ಒಂದು ಒಳ್ಳೆಯ ಕಾರ್ಯಕ್ರಮವನ್ನು ನೋಡುವ ಮತ್ತು ಕೇಳುವ ಅವಕಾಶ ಹೀಗೆ ಒದಗಿಬಂದಿತು. ಮೊನ್ನೆಮೊನ್ನೆ ನಡೆದ ಸಾಹಿತ್ಯಸಂಮೇಳನದಲ್ಲೂ ಸಂವಾದ ಕಾರ್ಯಕ್ರಮವಿತ್ತು. ಬೇಡವೆಂದರೂ ಹೋಲಿಕೆ ಮನಸ್ಸಿನಲ್ಲಿ ಇಣುಕಿತು. ಅಲ್ಲಿ ಪ್ರಶ್ನೆ ಹತ್ತು ನಿಮಿಷದದ್ದಾದರೆ, ಉತ್ತರ ಯಶೋದೆಗೆ ಕೃಷ್ಣ ಬಾಯಲ್ಲಿ ಬ್ರಹ್ಮಾಂಡ ತೋರಿಸಿದ ಹಾಗೆ ಉತ್ತರ ಮೂವತ್ತು ನಿಮಿಷದ್ದಾಗಿ ನಾವೆಲ್ಲಾ ದಿಗ್ಭ್ರಮೆಗೆ ಒಳಗಾಗಿದ್ದೆವು. ಇಲ್ಲಿ ಕೃತಿ ಮತ್ತು ಕೃತಿಗಳ ಕುರಿತಾಗಿದ್ದರೆ, ಅಲ್ಲಿ ಬಯಲೇ ಮಿತಿಯಾಗಿತ್ತು. ಸಾಹಿತ್ಯಿಕ ಕಾರ್ಯಕ್ರಮಗಳು ಬಹಳ ವಿರಳವಾಗಿ ನಡೆಯುವ ನನ್ನೂರಿನಲ್ಲಿ ನಡೆದ ಈ ಕಾರ್ಯಕ್ರಮಗಳು ಮನಸ್ಸಿಗೆ ಒಂದು ಉಲ್ಲಾಸವನ್ನೇ ತಂದುಕೊಟ್ಟಿವೆ.

ಇನ್ನು ಬರುವ ಶನಿವಾರ ತುಂಗಾ ಮಹೋತ್ಸವ. ನದೀ ತೀರದಲ್ಲಿ . ರಾತ್ರಿ ಏಳರಿಂದ ಮಾರನೆಯ ದಿನ ಬೆಳಿಗ್ಯೆ ಆರರವರೆಗೆ. ಉಣ್ಣಿಕೃಷ್ಣನ್,ಮೊದಲಾದವರು ಬರುತ್ತಿದ್ದಾರೆ. ಚಳಿ ಎಷ್ಟೇ ಇರಲಿ. ಸರ್ವ ಸಿದ್ಧತೆಯಿಂದ ಹೋಗಿ ರಾತ್ರಿ ಹಗಲಾಗಿಸಬೇಕು. ಕಾಯುತ್ತಿದ್ದೇನೆ-ಶನಿವಾರಕ್ಕಾಗಿ.

ವಾರದ ಓದು-ರೈತನಾಗುವ ಹಾದಿಯಲ್ಲಿ -ಎಸ್.ಎಂ.ಪೆಜತ್ತಾಯ(೧೧೪),Tell me why , mummy-David Thomas.(321)

Tuesday, February 1, 2011

ಮೀರಿದ ಮಾತು

ಮೀರಿದ ಮಾತು.

ಕಳೆದ ವಾರ ಅನಿವಾರ್ಯವಾಗಿ ಮಂಗಳೂರಿನಲ್ಲಿ ಮೂರು ದಿನ ನಿಲ್ಲಬೇಕಾದ ಸಂದರ್ಭ ಒದಗಿಬಂದಿತು. ಈ ಹಿಂದೆ ಹಲವಾರು ಬಾರಿ ಅಲ್ಲಿಗೆ ಹೋಗಿಬಂದಿದ್ದೆನಾದರೂ ವಾಸ್ತವ್ಯ ಹೂಡದೇ ಎಂಟು ತಿಂಗಳ ಮೇಲಾಗಿತ್ತು. ಹೊರಡುವ ಮುನ್ನ ಏನೋ ಉತ್ಸಾಹ. ಬಿಟ್ಟನೆಂದರೂ ಬಿಡದ ವ್ಯಾಮೋಹ. ನನ್ನ ಕಾಲೇಜಿನ ಹಳೆಯ ವಿದ್ಯಾರ್ಥಿಸಂಘದ ಮೂವತ್ತನಾಲ್ಕನೆಯ ವಾರ್ಷಿಕ ದಿನಾಚರಣೆ. ಇಷ್ಟೂ ವರುಷ ಅವರು ಇದನ್ನು ನಡೆಸಿಕೊಂಡು ಬಂದಿದ್ದಾರೆ. ಬೆಳಿಗ್ಯೆ ಸರ್ವಸದಸ್ಯರ ಸಭೆ, ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆ ಮತ್ತು ಆಟೋಟವಿರುತ್ತದೆ. ಸಂಜೆಯ ಸಭೆಯಲ್ಲಿ ಹಳೆಯ ವಿದ್ಯಾರ್ಥಿಯನ್ನೇ ಸಮಾರಂಭದ ಅಧ್ಯಕ್ಷನನ್ನಾಗಿಸಿ ಕಾರ್ಯಕ್ರಮ ನಡೆಸುತ್ತಾರೆ ಮತ್ತು ಕೊನೆಯಲ್ಲಿ ಊಟವಿರುತ್ತದೆ. ಮತ್ತು ನಿವೃತ್ತರಾದ ಅಧ್ಯಾಪಕರಿಗೆ, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವಿರುತ್ತದೆ. ಈ ಬಾರಿ ನನ್ನ ಕಾಲೇಜಿನ ಮೊತ್ತಮೊದಲ ಬ್ಯಾಚಿನ ವಿದ್ಯಾರ್ಥಿ ಶ್ರೀ ವಸಂತ ಶೆಣೈ ನಗರ್ ಅಧ್ಯಕ್ಷನಾಗಿದ್ದ. ತುಂಬಾ ಚೆನ್ನಾಗಿಯೇ ಮಾತನಾಡಿದ. ಈ ವರುಷ ನಿವೃತ್ತರಾದ ಪ್ರೊ.ಜಿ.ಜಿ.ಪ್ರಭು ಮತ್ತು ದೈಹಿಕ ಶಿಕ್ಷಣ ಅಧ್ಯಾಪಕರಾದ ಶ್ರೀ ದಾಮೋದರ ಗೌಡರನ್ನು ಮತ್ತು ಈ ಬಾರಿ ರಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆದಿನ ಬೆಳಿಗ್ಯೆಯಿಂದ ರಾತ್ರಿಯವರೆಗೆ ಹಳೆಯ ವಿದ್ಯಾರ್ಥಿಗಳ ಜತೆ ಕಾಲ ಕಳೆದದ್ದು ಮನಸ್ಸಿಗೆ ತುಂಬಾ ಸಂತೋಷವನ್ನು ಕೊಟ್ಟಿತು.

ಉಳಿದ ಎರಡು ದಿನಗಳಲ್ಲಿ ಬ್ಯಾಂಕಿಗೆ, ಎಲ್ಲೈಸಿ ಆಫೀಸಿಗೆ , ಪೋಸ್ಟ ಆಫೀಸಿಗೆ ಓಡುವದರಲ್ಲಿಯೇ ಕಳೆಯಿತು. ಬಾಕಿ ಉಳಿಸಿಕೊಂಡಿದ್ದ ಕೆಲಸಗಳೆಲ್ಲವನ್ನೂ ಮಾಡಿ ಮುಗಿಸಿದೆ. ಅತ್ರಿಗೆ ಭೇಟಿ ನೀಡಿ ಒಂದಿಷ್ಟು ಪುಸ್ತಕಗಳ ಖರೀದಿ ಮಾಡಿದೆ. ಅದೃಷ್ಟವಶಾತ್ ಅಲ್ಲಿ ಗೆಳೆಯ ಶ್ರೀ ನರೇಂದ್ರ ಪೈಯವರೂ ಸಿಕ್ಕಿದ್ದರು. ಅವರೊಡನೆ ಹೆಚ್ಚು ಮಾತನಾಡಲಾಗಲಿಲ್ಲ ಎಂಬ ಕೊರಗು ಕಾಡುತ್ತಿದೆ. ಮಾತನಾಡಲಿಕ್ಕೇನೂ ಇಲ್ಲದಿದ್ದರೂ ಸುಮ್ಮನೇ ಮೌನವಾಗಿ ಕುಳಿತುಕೊಳ್ಳಬಹುದಿತ್ತು ಎಂದು ಈಗ ಅನಿಸುತ್ತಿದೆ. ಪುಸ್ತಕಪ್ರೀತಿಯನ್ನು ಅಗಾಧವಾಗಿ ಬೆಳೆಯಿಸಿಕೊಂಡಿರುವ ಅವರೊಡನೆ ಮಾತನಾಡುವುದು ಎಂದರೆ ತುಂಬಾ ಖುಷಿಯನ್ನು ಕೊಡುತ್ತದೆ. ಇಂತಹವರು ಇಂದಿನ ದಿನದಲ್ಲಿ ತುಂಬಾ ವಿರಳರಾಗಿದ್ದಾರೆ. ಮತ್ತೊಮ್ಮೆ ಅಲ್ಲಿಗೆ ಹೋದಾಗ ಅವರೊಡನೆ ತುಂಬಾ ಮಾತನಾಡಬೇಕು ಎಂದು ಕನಸು ಕಟ್ಟಿಕೊಂಡಿದ್ದೇನೆ. ನಿವೃತ್ತನಾದ ಮೇಲೆ ಒಂದು ತರಹದ ಕೀಳರಿಮೆ ಬಂದಿದೆ. ಮತ್ತೊಬ್ಬರ ಮೌನವನ್ನು ಕಲಕುವ ಮನಸ್ಸು ಆಗುತ್ತಿಲ್ಲ. ಅವರು ಏನು ತಿಳಿದುಕೊಳ್ಳುತ್ತಾರೋ ಎಂಬ ಯೋಚನೆ ಬರುತ್ತದೆ. ಹಾಗಾಗಿ ಒಂದು ವಾರದಲ್ಲಿ ನನ್ನ ಪ್ರೀತಿಯ ನೋಕಿಯಾ ೮ರಿಂದ ಮಾಡುವ ಪೋನ್ ಕರೆಗಳು ಮೂರು ಅಥವಾ ನಾಲ್ಕು ಮಾತ್ರ. ನನಗೆ ಬರುವ ಕರೆಗಳು ಅಷ್ಟೇ ಸಂಖ್ಯೆಯದು ಅಥವಾ ಕೆಲವು ವಾರ ಅದೂ ಕಡಮೆ- ಒಂದು, ಎರಡು. ಹಾಗಾಗಿ ಕನಸುಗಳು -ಮತ್ತೊಬ್ಬರ ಜತೆಯಲ್ಲಿ ಕುಳಿತು ಮಾತನಾಡುವ-ಹಾಗೇ ಉಳಿದುಕೊಳ್ಳುತ್ತಿವೆ.

ಮೂರುದಿನಗಳ ನಂತರ ಊರಿಗೆ ಹೊರಟಾಗ ಉತ್ಸಾಹ. ಉಡುಪಿ ದಾಟಿ ಸೋಮೇಶ್ವರಕ್ಕೆ ಬಂದು ಘಟ್ಟದ ಒಂದೊಂದೇ ತಿರುವುಗಳನ್ನು ಏರುತ್ತಿರುವಾಗ ಊರು ಬಂದಿತು ಎಂಬ ಸಂತೋಷ. ಅಲ್ಲಿರುವಾಗ ಪಡೆದುಕೊಂಡಿರುವ ಸಂತೋಷವೇ ಬೇರೆ. ಇಲ್ಲಿ ನೆಮ್ಮದಿಯಿಂದ, ಗಲಾಟೆಯಿಲ್ಲದ ಈ ಊರಿನಲ್ಲಿ ಪಡೆಯುವ ಸಂತೋಷವೇ ಬೇರೆ. ಇದು ಮಿಗಿಲು.

ಕಳೆದ ಶುಕ್ರ ಮತ್ತು ಶನಿವಾರ ತಾಲ್ಲೂಕು ಸಾಹಿತ್ಯ ಸಮ್ಮೇಲನ ನಡೆಯಿತು. ನಿವೃತ್ತ ಪ್ರಾಧ್ಯಾಪಕರಾದ ಡಾ. ಜೆ.ಕೆ.ರಮೇಶರವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಶುಕ್ರವಾರದ ದಿನ ಕುಶಾವತಿಯ ಉದ್ಯಾನವನದಿಂದ ಸಾಂಸ್ಕೃತಿಕ ನಡಿಗೆ ಪ್ರಾರಂಭವಾಯಿತು. ಊರಿನ ಎಲ್ಲಾ ಶಾಲಾಮಕ್ಕಳು ಇದರಲ್ಲಿ ಭಾಗವಹಿಸಿದ್ದರು. ಒಂದಿಷ್ಟು ವೇಷಗಳು-ಎರಡು ಹುಲಿ. ಅಧ್ಯಕ್ಷರೊಡನೆ ಸಾಗಿಬಂದ ಸಮೂಹಮಾತ್ರ ತೀರಾ ಸಣ್ಣಸಂಖ್ಯೆಯದು. ಸಂಸ್ಕೃತಿಮಂದಿರದ ಬಳಿ ಮೂರು ಧ್ವಜಗಳನ್ನು ಮೂವರು ಅರಳಿಸಿದರು. ಉದ್ಘಾಟನಾಸಮಾರಂಭಕ್ಕೆ ತುಂಬಾ ಜನ ಸೇರಿದ್ದರು. ನಿಕಟಪೂರ್ವ ಸಂಮೇಲನದ ಅಧ್ಯಕ್ಷರಾದ ಪ್ರೊ.ಶ್ರೀನಿವಾಸ ಉಡುಪರೂ ಬೆಂಗಳೂರಿನಿಂದ ಭಾಗವಹಿಸಲು ಬಂದಿದ್ದರು. ಹೆಚ್ಚಿನ ಆಕರ್ಷಣೆಯೆಂದರೆ ನಮ್ಮೂರಿನವರಾದ ಯು.ಆರ್.ಅನಂತಮೂರ್ತಿ ಭಾಗವಹಿಸಿದ್ದು. ಅವರೊಡನೆ ಅವರ ಶ್ರೀಮತಿ, ಮಗಳು ಮತ್ತು ತಮ್ಮ ಗುರುರಾಜನೂ ಬಂದಿದ್ದರು. ಬಹಳಕಾಲದ ನಂತರ ಬಂದಿದ್ದ ಅವರು ತುಂಬಾ ಲಹರಿಯಲ್ಲಿದ್ದರು. ಮತ್ತು ಅವರೇ ಸಂಮೇಲನದ ಮುಖ್ಯ ಆಕರ್ಷಣೆಯಾಗಿದ್ದರು. ಮಾರನೆಯ ದಿನ ಅವರೊಡನೆ ಸಂವಾದ ಕಾರ್ಯಕ್ರಮವನ್ನೂ ಏರ್ಪಡಿಸಿದ್ದರು. ವೇದಿಕಮೇಲೆ ಹದಿನೈದು ಜನ. ಭಾಷಣಗಳ ಸುರಿಮಳೆ. ಅನಂತಮೂರ್ತಿಯ ಭಾಷಣವೂ ಎಂದಿನಂತೆ ಆಕರ್ಷಕವಾಗಿತ್ತು. ತೀರ್ಥಹಳ್ಳಿಯ ಸಾಂಸ್ಕೃತಿಕ ಮಹತ್ವವನ್ನು, ಅದರ ಶ್ರೀಮಂತಿಕೆಯನ್ನು ಹೆಚ್ಚು ಮಾಡಿದ ಹಿರಿಯರನ್ನು ಸ್ಮರಿಸಿಕೊಂಡರು. ಮರೆತೇಹೋಗಿದ್ದ ಅವರೆಲ್ಲರನ್ನೂ ತೀರ್ಥಹಳ್ಳಿಯ ಜನ ಮತ್ತೊಮ್ಮೆ ನೆನಪಿಸಿಕೊಂಡಂತೆ ಆಯಿತು.
ಮಧ್ಯಾಹ್ನದ ಊಟವಾದ ನಂತರ ಗೋಷ್ಟಿಗಳು ಪ್ರಾರಂಭವಾದವು. ಆದರೆ ಯಾವುದೂ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗಲಿಲ್ಲ ಮತ್ತು ಕೊನೆಗೊಳ್ಳಲಿಲ್ಲ. ಎಂಸಿಗಳು ಮಾತುಗಳಂತೂ ಘನಘೋರವಾಗಿದ್ದವು. ಭಾಷಣಕಾರರು ತೆಗೆದುಕೊಂಡ ಸಮಯಕ್ಕಿಂತಲೂ ಹೆಚ್ಚಿನ ಸಮಯವನ್ನು ಆವರು ತೆಗೆದುಕೊಂಡದ್ದೂ ಉಂಟು. ಸ್ವಾಗತ ಭಾಷಣ ಎರೆಡು ಬಾರಿ ನಡೆಯುತ್ತಿತ್ತು. ಒಮ್ಮೆ ಎಂಸಿ, ಮತ್ತೊಮ್ಮೆ ಸ್ವಾಗತ ಭಾಷಣಕಾರರಿಂದ. ಸಮಯ ವ್ಯರ್ಥವಾಯಿತಲ್ಲದೇ, ಪ್ರಧಾನ ಭಾಷಣಕಾರರಿಗೆ ಸಮಯ ಕಡಮೆಯಾಗುತ್ತಿತ್ತು. ಮೇಲಾಗಿ ಎರಡು ಕಡೆ ಗೋಷ್ಠಿಗಳು ನಡೆಯುತ್ತಿದ್ದವು. ಕೊನೆಕೊನೆಗೆ ಅಲ್ಲೂ ಜನವಿಲ್ಲ. ಇಲ್ಲೂ ಜನವಿಲ್ಲ. ಹಾಗಾಯಿತು.
ಕಾರ್ಯಕರ್ತರ ಪಡೆಯೇ ಇರಲಿಲ್ಲ. ಬಂದ ಅತಿಥಿಗಳನ್ನು ಗುರುತಿಸುವುದಾಗಲೀ , ಅವರಿಗೆ ಮಾರ್ಗದರ್ಶನ ಮಾಡುವರಾಗಲೀ ಯಾರೂ ಕಾಣುತ್ತಿರಲಿಲ್ಲ. ನನ್ನ ಗುರುಗಳಾದ ಪ್ರೊ.ಶ್ರೀನಿವಾಸ ಉಡುಪರು ಉದ್ಘಾಟನಾ ಸಮಾರಂಭವಾದನಂತರ ತೀರಾ ಒಂಟಿಯಾಗಿ ಬಿಟ್ಟಿದ್ದರು. ಅವರನ್ನು ಊಟಕ್ಕೆ ಕರೆದುಕೊಂಡು ಹೋಗುವ ಅಗತ್ಯ ಯಾರಿಗೂ ಕಂಡುಬರಲಿಲ್ಲ. ಅವರನ್ನು ನಾನು ಕರೆದುಕೊಂಡು ಹೋಗಿದ್ದೆ. ಆಕ್ಸಿಡೆಂಟ್ ಆಗಿ ನಡೆಯಲು ಶ್ರಮ ಪಡುತ್ತಿದ್ದ ಅವರನ್ನು ಸರಿಯಾಗಿ ಯಾರೂ ನಡೆಸಿಕೊಳ್ಳಲಿಲ್ಲವೆಂದೇ ನನ್ನ ಭಾವನೆ. ಊಟ ಮಾತ್ರ ತುಂಬಾ ರುಚಿಕಟ್ಟಾಗಿ ಮಾಡಿದ್ದರು. ಇದಕ್ಕೆ ಕಾರಣ ನಮ್ಮ ಕಡಿದಾಳು ಪ್ರಕಾಶ್. ತನಗೆ ವಹಿಸಿದ ಹೊಣೆಯನ್ನು ಎಷ್ಟು ಚೆನ್ನಾಗಿ ನಿರ್ವಹಿಸಿದ್ದಾರೆಂದರೆ ಅವರು ಎರಡೂ ದಿನ ತಮ್ಮ ಅಡುಗೆಕೋಣೆಯನ್ನು ಬಿಟ್ಟು ಹೊರಬರಲಿಲ್ಲ. ಯಾವ ಕೆಲಸಕೊಟ್ಟರೂ ಅತ್ಯಂತ ಪ್ರಾಮಾಣಿಕವಾಗಿ ಮಾಡುವ ಕಡಿದಾಳು ಪ್ರಕಾಶರನ್ನು ಎಷ್ಟು ಜನ ಗುರುತಿಸಿದ್ದಾರೊ ತಿಳಿಯಲಿಲ್ಲ.
ಎರಡನೆಯ ದಿನದ ಕಾರ್ಯಕ್ರಮಗಳಂತೂ ಅಧ್ವಾನದ ಸಂತೆ. ಎರಡೂ ವೇದಿಕೆಯಲ್ಲಿ ನಡೆಯಬೇಕಾಗಿದ್ದ ಗೋಷ್ಠಿಗಳು ಒಂದು ಗಂಟೆ ತಡವಾಗಿ ಪ್ರಾರಂಭವಾದವು. ಪ್ರಧಾನ ವೇದಿಕೆಯಲ್ಲಿ (ವಿಶ್ವಮಾನವ ವೇದಿಕೆ) ಕವಿಗೋಷ್ಠಿ. ೩೯ ಜನ ಕವಿಗಳು. ಉಪವೇದಿಕೆಯಲ್ಲಿ (ಕಡಿದಾಳು ಮಂಜಪ್ಪ ವೇದಿಕೆ) ಎರಡು ಗೋಷ್ಟಿ- ನಮ್ಮ ಹಿರಿಯರ ಸಾಹಿತ್ಯ ಮತ್ತು ಅನಂತ ಸಂವಾದ. ನಾನು ಕವಿಗೋಷ್ಠಿಯ ಕೊರತಕ್ಕೆ ಹೆದರಿ ಇತ್ತ ಹಾಜರಾದೆ. ಕುವೆಂಪು ಮತ್ತು ಹಾಮಾನರ ಬಗ್ಗೆ ಪ್ರೊ.ಎಲ್.ಸಿ.ಸುಮಿತ್ರಾ ತುಂಬಾ ಚೆನ್ನಾಗಿಯೇ ಮಾತನಾಡಿದರು. ಆದರೆ ಅವರಿಗೆ ಕೊಟ್ಟ ಅವಧಿ ಮಾತ್ರ ತೀರಾ ಕಡಮೆಯಾಯಿತು ಎಂದೆನಿಸಿತು. ವಿದ್ಯಾರ್ಥಿಗಳೇ ಹೆಚ್ಚಾಗಿ ಭಾಗವಹಿಸಿದ್ದರು. ಆದರೂ ತಮಗೆ ಕೊಟ್ಟ ಅವಧಿಯಲ್ಲಿಯೇ ಸುಮಿತ್ರಾ ಚೆಂದವಾಗಿ ಈ ಹಿರಿಯರ ಪರಿಚಯವನ್ನು ಮಾಡಿಕೊಟ್ಟರು. ಅನಂತಮೂರ್ತಿ ಮತ್ತು ತೇಜಸ್ವಿಯಬಗ್ಗೆ ಡಾ. ಎಚ್.ಟಿ.ಕೃಷ್ಣಮೂರ್ತಿ ತುಂಬಾ ಚೆಂದವಾಗಿ ಮಾತನಾಡಿದರು. ಇಬ್ಬರಿಗೂ ಇರುವ ವ್ಯತ್ಯಾಸ ಮತ್ತು ಇವರಿಬ್ಬರೂ ಮಾಡಿದ ಸಾಧನೆಯನ್ನು ವಿವರಿಸಿದರು. ಎಂಕೆ.ಇಂದಿರಾ ಮತ್ತು ಎಸ್.ವಿ.ಪರಮೇಶ್ವರ ಭಟ್ಟರ ಬಗ್ಗೆ ಪ್ರೊ.ಕೆ.ಟಿ.ಪಾರ್ವತಮ್ಮ ಮಾತ್ರ ನೀರಸವಾಗಿ, ಪ್ರಬಂಧವನ್ನು ಮಂಡಿಸಿದರು. ಅವರ ಪ್ರಬಂಧ ಯಾರಮೇಲೂ ಪ್ರಭಾವ ಬೀರಲಿಲ್ಲ. ಎಂಸಿಯ ಹಾವಳಿಯಂತೂ ತೀರಾ ಇತ್ತು ಇಲ್ಲಿ.
ನಂತರ ಹನ್ನೆರೆಡೂ ಮುಕ್ಕಾಲಿಗೆ (ತೊಂಭತ್ತು ನಿಮಿಷ ತಡವಾಗಿ) ಅನಂತ ಸಂವಾದ ನಡೆಯಿತು. ಸುಮಾರು ಇಪ್ಪತ್ತು ಜನರನ್ನು ಅವರಿಗೆ ಪ್ರಶ್ನೆ ಮಾಡಲು ಆಹ್ವಾನಿಸಿದ್ದರು. ಅವರೆಲ್ಲರನ್ನೂ ಪರಿಚಯಿಸಿ, ಕುಳ್ಳಿರಿಸಿದಮೇಲೆ ಪ್ರಶ್ನೆಗಳು ಪ್ರಾರಂಭವಾದವು. ಒಂದು ಪ್ರಶ್ನೆಗೆ ಹದಿನೈದು ನಿಮಿಷಗಳ ಉತ್ತರ. ಅನಂತಮೂರ್ತಿಯವರ ಮಾತಿನಲ್ಲಿ ಹೊಸತೇನೂ ಇರಲಿಲ್ಲ. ಅವರ ಎಂದಿನ ಲೇಖನಗಳ ಸಾರಾಂಶವೇ ಅಡಕವಾಗಿರುತ್ತಿತ್ತು. ಅವರ ಮಾತುಗಳನ್ನು ಒಮ್ಮೆ ಕೇಳಿದವರಿಗೆ ಹೊಸತೇನೂ ಇರಲಿಲ್ಲ. ಊರಿನ ಜನ ಮಾತ್ರ ಅಭಿಮಾನದಿಂದ, ಆಸಕ್ತಿಯಿಂದ ಅವರನ್ನು ಆರಾಧನಾಭಾವದಿಂದ ನೋಡುತ್ತಿದ್ದರು.
ಮಧ್ಯಾಹ್ನ ವಿಶ್ವಮಾನವವೇದಿಕೆಯಲ್ಲಿ ನಡೆದ ಗೋಷ್ಠಿ ಗೊಂದಲದಿಂದ ಕೊನೆಗೊಂಡಿತು. ಸಮಕಾಲೀನ ಸವಾಲುಗಳು ಎಂಬ ವಿಷಯದ ಮೇಲೆ ಪ್ರೊ.ಪಟ್ಟಾಭಿರಾಮ ಸೋಮಯಾಜಿ, ಪ್ರೊ.ವಿ.ಎಸ್.ಶ್ರೀಧರರ ಮಾತು ಮುಗಿದನಂತರ ನವವಸಾಹತುಶಾಹಿ ಮತ್ತು ದುಡಿವವರ್ಗವೆನ್ನುವ ವಿಷಯದಮೇಲೆ ಡಾ.ಎಂ.ವಿ.ವಸುರವರು ಪ್ರಾರಂಭದಲ್ಲಿಯೇ ಬಿಜೆಪಿ ಮತ್ತು ನರೇಂದ್ರಮೋದಿಯವರ ಪ್ರಸ್ತಾವವನ್ನು ಅನಗತ್ಯವಾಗಿ ಮಾಡುತ್ತಾ ಟೀಕೆಯನ್ನು ಪ್ರಾರಂಭಿಸಿದಾಗ ಸಭೆಯಲ್ಲಿ ಕುಳಿತಿದ್ದ ಮಾಜಿ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ ಸರಿಯಾಗಿ ಗದರಿಸಿದರು. ವಿಷಯವನ್ನು ಬಿಟ್ಟು ಮಾತನಾಡಬೇಡಿ ಎಂದರು. ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬ ಉತ್ತರ ಬಂದಿತು. ಅವರ ಪರವಾಗಿ ಕೆಲವರು ಸಂಯೋಜಕರೂ ಸೇರಿದಾಗ ಸಭೆಯಲ್ಲಿದ್ದವರೆಲ್ಲರೂ ಅದನ್ನು ವಿರೋಧಿಸಿದರು. ಆಗ ಹಾಲಿ ಶಾಸಕರಾದ ಕಿಮ್ಮನೆಯವರು ಮಧ್ಯೆ ಪ್ರವೇಶಿಸಿ ಇಲ್ಲೀಗ ವಿಷಯಾಂತರವಾಗಿದೆ ಎಂದು ಒಪ್ಪಿಕೊಂಡು ಎಲ್ಲರ ಕ್ಷಮೆಯಾಚಿಸಿ ಗೊಂದಲವನ್ನು ತಿಳಿಯಾಗಿಸಿದರು. ವಸುರವರ ಮಾತು ಇಲ್ಲಿಗೇ ನಿಂತಿತು.
ಒಂದು ರೀತಿಯಲ್ಲಿ ಇಲ್ಲಿ ನಡೆದ ಸಾಹಿತ್ಯ ಸಂಮೇಲನ ಬಂಡಾಯ ಸಂಮೇಲನದ ಹಾಗೆ ಕಾಣಿಸಿತು. ಸಾಹಿತ್ಯದ ಕುರಿತಾಗಿರುವ ವಿಷಯಗಳಿಗೆ ಪ್ರಾಧಾನ್ಯ ಕೊಡುವುದಕ್ಕಿಂತ ಬೇರೆ ವಿಷಯಗಳಿಗೆ ಹೆಚ್ಚಿನ ಪ್ರಾಧಾನ್ಯವನ್ನು ಕೊಟ್ಟಿರುವ ಹಾಗೆ ಅನಿಸುತ್ತಿತ್ತು. ;ಶಿಕ್ಷಣ, ಚಳುವಳಿಗಳು, ಕೃಷಿ, ಧರ್ಮ, ರಾಜಕಾರಣ ಹೀಗೆ ಇಂತಹ ವಿಷಯಗಳ ಕುರಿತು ಭಾಷಣಗಳು ನಡೆದಿವೆ. ಸಾಹಿತ್ಯಕ್ಕೂ ಇವುಗಳಿಗೂ ಇರುವ ಸಂಬಂಧವೇನು ನನಗೆ ತಿಳಿಯಲಿಲ್ಲ. ಸಾಹಿತ್ಯದ ಆಸಕ್ತಿಯನ್ನು ಮೂಡಿಸುವ , ಅಭಿರುಚಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳೇ ನಡೆದಿಲ್ಲ. ಭಾಷಣಕಾರರೆಲ್ಲಾ ಒಂದು ರೀತಿಯ ಫೈರ್ ಬ್ರಾಂಡ್‍ಗಳೇ. ಮಾತುಗಳೆಲ್ಲವೂ ಪ್ರಸ್ತುತ ರಾಜಕಾರಣದತ್ತ, ಬಿಜೆಪಿಯನ್ನು ನಿಂದಿಸುವತ್ತ ಗಿರಕಿಹೊಡೆಯುತ್ತಿದ್ದವು(ಬಿಜೆಪಿಯ ಕುರಿತು ನನಗೆ ಯಾವ ರೀತಿಯ ಅನುಕಂಪವೂ ಇಲ್ಲ). ಶುದ್ಧ ಸಾಹಿತ್ಯದತ್ತ , ಇತ್ತೀಚೆಗೆ ಬರುತ್ತಿರುವ ಪುಸ್ತಕಗಳ ಕುರಿತು ಮಾತುಗಳಿದ್ದರೆ ಚೆಂದವಿರುತ್ತಿತ್ತು ಎನ್ನುವ ಭಾವನೆ ನನ್ನ ಒಬ್ಬನದೇ ಅಲ್ಲ. ಹಲವರಿದ್ದಿತ್ತು.

ಶನಿವಾರ ಮತ್ತು ಭಾನುವಾರ ಊರಿನ ಸಂಗೀತ ಶಾಲೆಯ -ಸುಮುಖ ಸಂಗೀತಶಾಲೆಯ ವಾರ್ಷಿಕೋತ್ಸವದ ಕಾರಣ ರಾಮಮಂದಿರದಲ್ಲಿ, ದೇವಸ್ಥಾನದ ಅಂಗಳದಲ್ಲಿ ಮಕ್ಕಳ ಮತ್ತು ಹಿರಿಯರ ಸಂಗೀತ ಕಚೇರಿ ಇತ್ತು. ಪುದುಕೋಟೆ ರಾಮನಾಥನ್ ರವರ ಪೀಟಿಲು ವಾದನ ಮನಸ್ಸನ್ನು ತೃಪ್ತಿಪಡಿಸಿತು. ಒಳ್ಳೆಯ ಸಂಗೀತಕ್ಕಾಗಿ ಹಪಹಪಿಸುತ್ತಿದ್ದ ಕಿವಿಗಳು ಈ ಕಾರ್ಯಕ್ರಮದಿಂದ ತುಂಬಾ ಖುಷಿಪಟ್ಟವು.

ವಾರದ ಓದು. ೧. ಟಿಕ್ ಟಕ್ ಪೆನ್ನು-ನರೇಂದ್ರ ಪೈ (೧೧೦), ಹಿರಿಯರು ಹೇಳಿದ ಕೆಲವು ಕಥೆಗಳು(೧೧೯), ಈಸೋಫನ ಕಥೆಗಲು(೧೪೯) ಮತ್ತು ಅಕ್ಬರ್ ಬೀರಬಲರ ಕಥೆಗಳು (೨೦೬)- ಮೂರು ಪುಸ್ತಕಗಳ ಲೇಖಕರು-ಪ್ರೊ.ಎನ್.ಗೋಪಾಲಕೃಷ್ಣ ಉಡುಪ,