ತಕಿಟ ತಕಿಟ ಧೋಂ

Sunday, November 28, 2010

ಕಭಿ ಖುಷಿ ಕಭಿ ಗಂ

ಕಭಿ  ಖುಷಿ ಕಭಿ ಗಂ


ಕಳೆದ ವಾರದ ಏಳು ದಿನಗಳಲ್ಲಿ ಐದು ದಿನ ಸಂಜೆ ಮತ್ತೆ ಅದೇ ಮೋಡ ಮತ್ತು ಅದೇ ಮಳೆ. ಉಳಿದ ಎರಡು ದಿನಗಳಲ್ಲಿ ಸಂಜೆ ಕಾಣಿಸಿಕೊಂಡ ಬಿಸಿಲು ಮನಸ್ಸಿಗೆ ಎಷ್ಟು ಸಂತೋಷ ತಂದುಕೊಟ್ಟಿತು ಎಂದರೆ ದಿನಾ ಹೀಗೆ ಇರಬಾರದಾ ಎಂದೆನಿಸಿತು. ಮತ್ತೆ ನಾಳೆ ಹೇಗೋ ಏನೋ ಎಂಬ ಚಿಂತೆ ಕಾಡುತ್ತಿತ್ತು. ಅರ್ಥ ಮಾಡಿಕೊಳ್ಳಲಿಕ್ಕೂ ಸಾಧ್ಯವಿಲ್ಲದ ಹವಾಮಾನ ನಮ್ಮೆಲ್ಲರ ತಲೆಯನ್ನಂತೂ ತಿನ್ನುತ್ತಿದೆ. ಇಂತಹ ವಾತಾವರಣ ಮನಸ್ಸನ್ನು ಮುದುಡಿಸುತ್ತಿದೆ. ಖಿನ್ನತೆ ಆವರಿಸಿಕೊಳ್ಳುತ್ತಿದೆ. ಯಾವ ಕೆಲಸದಲ್ಲಿಯೂ ಉತ್ಸಾಹವಿರುವುದಿಲ್ಲ. ಬೆಳಿಗ್ಯೆ ಏಳುವಾಗಲೇ ಮೋಡ ತುಂಬಿದ ಆಕಾಶ ಕಂಡಾಗ ಯಾರಿಗಾದರೂ ಉತ್ಸಾಹ ಬರುವುದು ಹೇಗೆ?. ಮಳೆಗಾಲವಂತೂ ಅಲ್ಲ. ಈಗ ಯಾವತ್ತೂ ಮಳೆಗಾಲವೇ. ಪ್ರತಿದಿನದ ಪತ್ರಿಕೆಯಲ್ಲಿ ಹವಾಮಾನ ವರದಿ ನೋಡಿದಾಗ ಮತ್ತೆ ಮಳೆ ಬರುವ ಸಂಭವವುಂಟು ಎಂದು ತಿಳಿದಾಗ ಮತ್ತೆ ಮತ್ತೆ ಮನಸ್ಸು ಕುಸಿದುಹೋಗುತ್ತಿದೆ.


ಹೇಳಿ ಕೇಳಿ ನನ್ನೂರು ಅಂತಹ ದೊಡ್ಡ ಊರೇನೂ ಅಲ್ಲ. ಸಾಹಿತ್ಯಕ ಕಾರ್ಯಕ್ರಮಗಳಾಗಲೀ ಅಥವಾ ಬೇರೆ ಕಾರ್ಯಕ್ರಮಗಳು ನಡೆಯುವುದೇ ಕಷ್ಟದಲ್ಲಿ. ಸಾಂಸ್ಕೃತಿಕವಾಗಿ ಬಹಳ ಸಂಪನ್ನವಾಗಿರುವ ಊರು ಎಂದು ಒಂದು ಕಾಲದಲ್ಲಿ ಹೆಸರನ್ನು ಪಡೆದಿತ್ತು ನನ್ನೂರು. ಆದರೆ ಈಗ ಕಾಲ ಬದಲಾಗಿದೆ. ತಿಳಿದವರು, ಬುದ್ಧಿವಂತರು, ಓದುಗರು ಸೇರುವುದೇ ವಿರಳವಾಗಿ ಹೋಗಿದೆ. ಬೇರೆಯವರ ಮಾತುಗಳನ್ನು ಕೇಳುವ ಅವಕಾಶವನ್ನೇ ನಾವು ಕಳೆದುಕೊಂಡಿದ್ದೇವೆ. ಊರು ನಿಧಾನವಾಗಿ ಎಚ್ಚತ್ತುಕೊಳ್ಳುತ್ತದೆ ಮತ್ತು ರಾತ್ರಿ ಎಂಟುಗಂಟೆಯೆನ್ನುವಾಗ ನಿದ್ರಿಸಲು ಪ್ರಾರಂಭಿಸುತ್ತದೆ. ಧಾವಂತವಿಲ್ಲದ ನಡೆ ನನ್ನೂರಿನದು. ನಾವು ಹಾಗೇ ಆಗಿಬಿಟ್ಟಿದ್ದೇವೆ. ಒಂದು ಕಾಲದಲ್ಲಿ ಬೆಳ್ಳಂಬೆಳಗ್ಗೆ ಎದ್ದು ಚಟುವಟಿಕೆಯಿಂದ ಬದುಕು ನಡೆಸುತ್ತಿದ್ದ ನಾನು ಈಗ ಹೊಂದಿಕೊಂಡಿದ್ದೇನೆ ನನ್ನೂರಿಗೆ. ಗಂಟೆ ಐದೂವರೆ ಎನ್ನುವಾಗ ಬೆಳಗಾಗುತ್ತದೆ. ಹಾಲು ಮತ್ತು ಪೇಪರ್ ತೆಗೆದುಕೊಂಡು ಬಂದರೆ ದಿನದ ವ್ಯವಹಾರ ಮುಗಿದ ಹಾಗೆ. ಮೊದಲಿನ ಪುಟದಿಂದ ಕೊನೆಯ ಪುಟದವರೆಗೆ ಎಲ್ಲಾ ಆರು ಪತ್ರಿಕೆಗಳನ್ನು ಓದುವುದರಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ಬೇರೆ ಯಾವುದೇ ಹೇಳಿಕೊಳ್ಳುವ ಕೆಲಸವಿಲ್ಲದೇ ಇದ್ದುದರಿಂದ ಅದರಲ್ಲಿಯೇ ಸುಖ ಹುಡುಕುತ್ತಿದ್ದೇನೆ.ಇದರ ಜತೆಗೆ ಮತ್ತುಳಿದ ಪುಸ್ತಕಗಳಿವೆ. ಹೊಸತಾಗಿ ಬರುತ್ತಿರುವ ಪುಸ್ತಕಗಳನ್ನು ತರಿಸಿಕೊಂಡು ಓದುವುದು ಮತ್ತು ಅದನ್ನು ಬೇರೆಯವರಿಗೆ ಹೇಳಿ ಅದನ್ನು ಓದುವಂತೆ ಮಾಡುವ ಪ್ರಯತ್ನ ಮಾಡುತ್ತಿರುತ್ತೇನೆ.   


ಕಳೆದವಾರದ ಓದು:ಜೀವಧ್ವನಿ - ಸರ್ಜಾಶಂಕರ ಹರಳಿಮಠ. (೧೫೨ಪು) ಜೋಗಿಕಾಲಂ-ಜೋಗಿ(೨೧೬ಪು) ಕಾಸರಗೋಡಿನ ಸಣ್ಣಕತೆಗಳು (೩೫೩) ಮತ್ತು ಮರುಓದು ತೇಜಸ್ವಿಯವರ ಪಾಕಕ್ರಾಂತಿ (೮೯ಪು)

Wednesday, November 17, 2010

ಮತ್ತದೇ ಬೇಸರ, ಅದೇ ಮೋಡ, ಅದೇ ಮಳೆ.

ಮತ್ತದೇ ಬೇಸರ, ಅದೇ ಮೋಡ, ಅದೇ ಮಳೆ.


ಪ್ರಾಯವಾಗುತ್ತಾ ಹೋದಂತೆ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾ "ಹಿಂದೆಲ್ಲಾ ಹೀಗಿರಲಿಲ್ಲ" ಎಂದು ಹಪಹಪಿಸುವುದು ಸಾಮಾನ್ಯ.  ಈಗಿನ ವಾತಾವರಣ ನೋಡಿ. ಮಳೆಗಾಲ ಸಾಧಾರಣವಾಗಿ ಅಕ್ಟೋಬರ್ ತಿಂಗಳಿಗೆ ಮುಗಿದು ಹೋಗುತ್ತಿತ್ತು. ನವೆಂಬರ್ ಡಿಸೆಂಬರ್ ತಿಂಗಳೆಂದರೆ ಥರಥರ ನಡುಗಿಸುವ ಚಳಿ ಕಾಣಿಸಿಕೊಳ್ಳಬೇಕಾಗಿತ್ತು. ಈಗ ಏನಾಗಿದೆ ಎಂದರೆ ಇನ್ನೂ ಮಳೆಗಾಲ ಮುಗಿದಿಲ್ಲ. ಪ್ರತಿದಿನವೂ ಮಳೆ ಮಳೆ. ಮನಸ್ಸನ್ನು ಮುದುಡಿಸುವ ಮಳೆ. ಬೇಸರವನ್ನು ಹೆಚ್ಚಿಸುವ ಮಳೆ. ಉತ್ಸಾಹವನ್ನು ಕುಗ್ಗಿಸುವ ಮಳೆ . ಹಗಲಿಡೀ ಮಬ್ಬುಗತ್ತಲೆ. ಮಧ್ಯಾಹ್ನವಾಗುತ್ತಲೇ ಸುರಿವ ಮಳೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆನ್ನುವಂತೆ , ಬೆಳೆದ ಬೆಳೆ ಎಲ್ಲವೂ ಮಳೆಯಲ್ಲಿ ಕರಗಿಹೋಗುತ್ತಿದೆ. ಮುಗ್ಗಲು ವಾಸನೆ ಎಲ್ಲೆಲ್ಲೂ ತುಂಬಿಕೊಂಡಿದೆ. ಹೊರಗಿನ ಮಬ್ಬುಗತ್ತಲೆ ನಮ್ಮ ಮನಸ್ಸನ್ನೂ ಆವರಿಸಿಕೊಂಡಿದೆ. 


ಓದು ಮಾತ್ರ ಎಲ್ಲವನ್ನೂ ಮರೆಯಿಸುವ ಶಕ್ತಿಯನ್ನು ಪಡೆದುಕೊಂಡಿದೆ ಎಂದೆನಿಸುತ್ತದೆ. ಕುಗ್ಗಿದ ಮನಸ್ಸನ್ನು ಸ್ವಲ್ಪವಾದರೂ ಚೇತೋಹಾರಿಯಾಗಿಸುತ್ತದೆ. ಪ್ರತಿನಿತ್ಯ ಮನೆಗೆ ಬರುವ ಆರು ದಿನಪತ್ರಿಕೆಗಳು ಮನಸ್ಸನ್ನು ಮುದುಡಿಸುತ್ತವೆ. ಒಂದಾದರೂ ಒಳ್ಳೆಯ ಸುದ್ದಿಯಿಲ್ಲದೇ ಕೇವಲ ರಾಜಕೀಯ ಹಗರಣಗಳಿಂದ ಕೂಡಿ ನಾವು ಎಂತಹ ದಿನಗಳಲ್ಲಿ ಬದುಕುತ್ತಿದ್ದೇವೆ. ಇದನ್ನು ಬದಲಾಯಿಸುವುದಾದರೂ ಹೇಗೆ ಎನ್ನುವುದೇ ಅರ್ಥವಾಗುತ್ತಿಲ್ಲ. 


ಬಹುಶಃ ಆಳುವವರು ಒಳ್ಳೆಯ ಪುಸ್ತಕಗಳನ್ನು ಓದದೇ ಇರುವುದರಿಂದ ಲೋಕದ ಪರಿಜ್ಞಾನವನ್ನು ಪಡೆದುಕೊಳ್ಳದೇ ಹೋದರು.ಸ್ವಾರ್ಥಿಗಳಾಗುತ್ತಾ ಹೋದರು. ಉಳಿದವರ ಬಗ್ಗೆ ಯೋಚಿಸದೇ ಕಲ್ಲುಮನಸ್ಸಿನವರಾಗಿ ಹೋದರು.  ಓದುವ ಹವ್ಯಾಸವಿರುವವರು ಬೇರೆಯವರ ಮನಸ್ಸನ್ನು . ಬದುಕನ್ನು ಅರ್ಥಮಾಡಿಕೊಳ್ಳಲು ಸಮರ್ಥರಿರುತ್ತಾರೆ. ಹಾಗಾಗಿಯೇ ನಾನು ನನ್ನ ವಿದ್ಯಾರ್ಥಿಗಳಿಗೆ ದಿನನಿತ್ಯ ಒಂದು ಮೂವತ್ತು ಪುಟಗಳನ್ನಾದರೂ ಓದುವ ಹವ್ಯಾಸವಿಟ್ಟುಕೊಳ್ಳಿ ಎಂದು ಹೇಳುತ್ತಿದ್ದೆ. ನಾನಂತೂ ಆ ಅಭ್ಯಾಸವನ್ನು ಇವತ್ತಿನವರೆಗೂ ಬಿಟ್ಟಿಲ್ಲ. 


ನಿವೃತ್ತನಾದರೂ ಸಮಯ ಕಳೆಯುವುದು ನನಗೆ ಸಮಸ್ಯೆಯಾಗಿಲ್ಲ. ಮನೆತುಂಬಾ ತುಂಬಿಕೊಂಡಿರುವ ಪುಸ್ತಕಗಳು ಮನಸ್ಸಿಗೆ ಖುಷಿಯನ್ನು ತಂದುಕೊಡುತ್ತಿವೆ. ಅವುಗಳ ಸಂಗದಲ್ಲಿ ಹೊತ್ತು ಹೋಗುತ್ತಿದೆ ನನಗೆ. ಓದುವುದರಲ್ಲಿಯೇ ಸಮಯದ ಪರಿಜ್ಞಾನವನ್ನು ಕಳೆದುಕೊಂಡ ನನ್ನನ್ನು ಹೊರಗೆ ಕವಿದ ಮಬ್ಬುಗತ್ತಲೆ ನಾಳಿನ ಬಗ್ಗೆ ಚಿಂತಿಸುವಂತೆ ಮಾಡುತ್ತಿವೆ. ನೆನೆದ ಪೈರನ್ನು ಉಳಿಸಲು ಹೆಣಗುತ್ತಿರುವ ರೈತನ ಬಗ್ಗೆ ಯೋಚಿಸುವಂತೆ ಮಾಡುತ್ತಿವೆ. ನಾಳೆ ಹೇಗೋ ಏನೋ ಎಂಬ ಭಯ ಕಾಡುತ್ತಿದೆ. ಮತ್ತೆ ಅಕಾಶ ತಿಳಿಯಾಗುವುದು ಯಾವಾಗ. ಮಳೆ ನಿಲ್ಲುವುದು ಯಾವಾಗ? ಒಂದೂ ಅರ್ಥವಾಗುತ್ತಿಲ್ಲ. 


ವಾರದ ಓದು" ಜೋಗಿಯವರ "ಜರಾಸಂಧ", ವಿಕಾಸ ಸ್ವರೂಪರ Q & A (slumdog millionaire) english ಕಾದಂಬರಿ ಓದಿದೆ. ಜತೆಗೆ ಡಿ.ಕೆ.ಚೌಟರ "ಮಿತ್ತಬೈಲು ಯಮುನಕ್ಕ" ಕಾದಂಬರಿಯನ್ನು ಮರುಓದಿದೆ. 

Wednesday, November 10, 2010

ಒಂದು ಪದ್ಯ ಮತ್ತು ಅನುವಾದ.

ಯಾವುದೋ ಒಂದು ಪುಸ್ತಕದಲ್ಲಿ ನನಗೆ ಈ ಪದ್ಯ ಸಿಕ್ಕಿತು. ಓದಿದಾಗ ನಾವು ಶಿಕ್ಷಕರು ಇದನ್ನು ಭಗವದ್ಗೀತೆಯಂತೆ ನಿತ್ಯ ಪಠನ ಮಾಡುತ್ತಿರಬೇಕು. ಮತ್ತು ತರಗತಿಗೆ ಹೋಗುವ ಮುನ್ನ ಇದರತ್ತ ಒಮ್ಮೆಯಾದರೂ ಕಣ್ಣು ಹಾಯಿಸುತ್ತಲೇ ಇರಬೇಕು ಎಂದೆನಿಸಿತು. ಅದನ್ನು ಚೆಂದವಾಗಿ ಪ್ರಿಂಟ್ ಮಾಡಿ ನನ್ನ ಟೇಬಲ್ ಮೇಲೆ ಇಟ್ಟುಕೊಂಡಿದ್ದೆ. ಪ್ರತಿಬಾರಿಯೂ ತರಗತಿಗೆ ಹೋಗುವ ಮುನ್ನ ಅದರತ್ತ ಕಣ್ಣು ಹಾಯಿಸಿ ಮತ್ತೆ ತರಗತಿಗೆ ಹೋಗುತ್ತಿದ್ದೆ. ಅದರ ಕನ್ನಡ ಅನುವಾದವನ್ನೂ ಮಾಡಿ ಇಟ್ಟುಕೊಂಡಿದ್ದೆ. ಅದನ್ನು ಓದಿದ ನನ್ನ ಗೆಳೆಯರು ಅದರ ಒಂದು ಪ್ರತಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಅದನ್ನು ಇಲ್ಲಿ ಕೊಟ್ಟಿದ್ದೇನೆ.

My Prayer.


 O God, giver of the gift of Life,


Bless me this day as I go to teach,


I thank you for my career.


                 And for the health and enthusiasm


                 You have given me,


                 I thank you for my teaching skill,


                 And the joy I find in it.


I thank you for my students,


And friends, in whose company


Joys are doubled, sorrows soothe,


And weakness changed into strength.


             Help me to be cheerful to day,
        
             Kind and loving to my students,


             That they may be happy


             In my company.


ಕನ್ನಡ ಅನುವಾದ:


ಬದುಕಿನ ದಾನ ನೀಡಿದ ದೈವವೇ,
ಪಾಠ ಹೇಳ ಹೊರಟ ನನ್ನನ್ನು ಆಶೀರ್ವದಿಸು.
ಈ ವೃತ್ತಿಗಾಗಿ ನಾನು ಸದಾ ಋಣಿ.


              ನೀ ನೀಡಿದ ಉತ್ಸಾಹ ಮತ್ತು ಆರೋಗ್ಯಕ್ಕಾಗಿ,
                  ಪಾಠ ಹೇಳುವ ಕಲೆಗಾಗಿ
                                ಅದರಿಂದ ನಾ ಪಡೆವ ಆನಂದಕ್ಕಾಗಿ
                                                 ವಂದನೆಗಳು ನಿನಗೆ. 


ನನ್ನ ಸಜ್ಜನ ವಿದ್ಯಾರ್ಥಿಗಳಿಗಾಗಿ ಕೃತಜ್ಞತೆಗಳು ನಿನಗೆ.
      ಮತ್ತು ಗೆಳೆಯರಿಗಾಗಿ, ಯಾರ ಸಹವಾಸದಲ್ಲಿ
             ಸಂತೋಷ ಇಮ್ಮಡಿಯಾಗಿ, ಕಷ್ಟಗಳು ಕರಗಿ
                     ಬಲಹೀನತೆಯು ಬಲವಾಗಿ ಬದಲಾಗಿದೆಯೊ ಅದಕ್ಕಾಗಿ;.


ಇಂದು ನನ್ನ ಮಕ್ಕಳ ಮುಖದಲ್ಲಿ ನಗು ಮಾಸದಿರಲಿ.
     ಮಕ್ಕಳ ಮೇಲೆ ದಯೆ ಮತ್ತು ಪ್ರೀತಿ ಮಳೆಯಾಗಿ ಸುರಿಯಲಿ.
       ಮತ್ತು ಅವರು ನನ್ನೊಂದಿಗೆ ಸಂತೋಷದಿಂದಿರಲಿ.
          ಇದಿಷ್ಟನ್ನು ಮಾತ್ರ ಕರುಣಿಸು ತಂದೆಯೇ. 

ಇದನ್ನು ಬರೆದವರು ಯಾರು ಎನ್ನುವುದು ತಿಳಿದಿಲ್ಲ ಮತ್ತು ಈಗ ಇದನ್ನು ಯಾವ ಪುಸ್ತಕದಿಂದ ನಾನು ಬರೆದಿಟ್ಟುಕೊಂಡೆ ಎನ್ನುವುದೂ ನೆನಪಿಲ್ಲ.

ಕಳೆದವಾರ ಉಡುಪಿಅ ಗುರುರಾಜ ಸನೀಲ್ ಇವರು ಬರೆದ "ಹಾವು ನಾವು" ಪುಸ್ತಕ ಓದಿದೆ. ಜತೆಗೆ Mark Haddon ಬರೆದ curious incident of the dog in the night time"  ಓದಿದೆ. ಸಮಗ್ರ ಕುಂವೀ ಓದಲು ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದೆನಿಸಿತು. ಸದ್ಯಕ್ಕೆ ನೂರೈವತ್ತು ಪುಟಗಳನ್ನು ಮಾತ್ರ ಓದಿದ್ದೇನೆ.

Wednesday, November 3, 2010

ಸಂತೆಯಲ್ಲಿ ನಿಂತ ಸಂತ.


ಕಳೆದ ವಾರ ಯೋಚಿಸಿದಂತೆ ಮೂಡಬಿದ್ರೆಯ ನುಡಿಸಿರಿಗೆ ಹೋಗಿದ್ದೆ. ದಾರಿಯುದ್ದಕ್ಕೂ ಮೋಡ, ಮಳೆಯ ವಾತಾವರಣ. ಘಟ್ಟ ಇಳಿದು ದಕ್ಷಿಣ ಕನ್ನಡ ಜಿಲ್ಲೆಗೆ ಕಾಲಿಡುತ್ತಿದ್ದಂತೆ ಸ್ವಲ್ಪ ಬಿಸಿಲು ಕಾಣಿಸಿಕೊಂಡಿತು. ಮೂಡಬಿದ್ರೆ ಹಿತವಾದ ಬಿಸಿಲಿನಿಂದ, ಜನರ ಓಡಾಟದಿಂದ ತುಂಬಿಕೊಂಡಿತ್ತು. ಚಿತ್ರ ಕಲಾ ಪ್ರದರ್ಶನ ನೋಡಿ ಮತ್ತೆ ಪುಸ್ತಕದಂಗಡಿಗೆ ನುಗ್ಗಿದೆ. ಎಲ್ಲಿಹೋದರೂ ಜನ ಜನ ಜನ.ಶಾಲಾ  ಮಕ್ಕಳು ಪ್ರತಿ ಮಳಿಗೆಯಲ್ಲಿ ತುಂಬಿಕೊಂಡಿದ್ದರು. ನನ್ನಲ್ಲಿ ಇಲ್ಲದ ಪುಸ್ತಕಗಳನ್ನು ಹುಡುಕುವುದೇ ಕಷ್ಟವಾಯಿತು. ಆಕೃತಿಯ ಮಳಿಗೆಯಲ್ಲಿ ಸಮಗ್ರ ಕುಂವೀ ಸಿಕ್ಕಾಗ ಸಂಭ್ರಮಗೊಂಡಿದ್ದೆ. ಇನ್ನು ಒಂದು ತಿಂಗಳು ಯೋಚನೆಯಿಲ್ಲ. ಏಕೆಂದರೆ ಸುಮಾರು ಸಾವಿರ ಪುಟಗಳಿಷ್ಟಿರುವ ಪುಸ್ತಕ ಒಂದು ತಿಂಗಳ ಓದಿಗೆ ಸಾಕಾಗುತ್ತದೆ. 


ಎಲ್ಲಾ ಮಳಿಗೆಯಲ್ಲೂ ಒಂದೇ ರೀತಿಯ ಪುಸ್ತಕಗಳಿದ್ದವು. ವಿಶ್ವೇಶ್ವರ ಭಟ್‍ರ ಪುಸ್ತಕಗಳು, ಛಂದ ಪ್ರಕಾಶನದ ಪುಸ್ತಕಗಳು ಹೆಚ್ಚಾಗಿ ಎಲ್ಲಾ ಮಳಿಗೆಯಲ್ಲೂ ಕಾಣಿಸಿಕೊಂಡಿದ್ದವು. ಮಂಗಳೂರಿನಲ್ಲಿ ನಡೆದ ಪುಸ್ತಕಮೇಳದಲ್ಲಿ ವ್ಯಾಪಾರವೇ ಇರಲಿಲ್ಲವಂತೆ. ಇಲ್ಲಿ ನುಡಿಸಿರಿಯಲ್ಲಿ ಚೆನ್ನಾಗಿಯೇ ವ್ಯಾಪಾರ ಆಗಿರಬೇಕು. 


ಮತ್ತೆ ಹೊರಗೆ ಬಂದ ನಾನು ಯಾರಿಗೂ ಕಾಣಿಸಿಕೊಳ್ಳದಂತೆ ಅಡಗಿಕೊಳ್ಳುವುದರಲ್ಲಿಯೇ ಮಗ್ನನಾದೆ. ಗುರುತಿನವರು ಯಾರಾದರೂ ಸಿಕ್ಕರೆ ಮತ್ತೆ ಮಾತು ಮಾತು ಮಾತು . ನನಗಿದು ಬೇಕಿರಲಿಲ್ಲ. ನಾನು ಹೋದದ್ದೇ ಸಂತೆಯಲ್ಲಿ ನಿಂತ ಸಂತನಂತೆ ಇರಲು. ಗದ್ದಲದ ನಡುವೆಯೂ ನಾನು ನಾನಾಗಿರಲು . ಕೊನೆಗೂ ಅಲ್ಲಿಯೇ ಇದ್ದು ಇಲ್ಲದವನಂತೆ ಇರಲು ನನ್ನಿಂದ ಸಾಧ್ಯವಾಯಿತು. 


ಒಂದು ರೀತಿಯ ಸಂಕೋಚ , ಮುಜುಗರ ಕಾಡುತ್ತಿರುತ್ತದೆ. ನಾಲ್ಕು ಜನರ ನಡುವೆ ಕಾಣಿಸಿಕೊಳ್ಳಲು ಹಿಂಜರಿಕೆಯಾಗುತ್ತದೆ. ನಿವೃತ್ತನಾದ ಕಾರಣದಿಂದಲೋ ಏನೋ. ಎಲ್ಲಿಯೂ ಕಾಣಿಸಿಕೊಳ್ಳಲು ಆಸೆಯಾಗುವುದಿಲ್ಲ. ನನ್ನ ಸುತ್ತ ಇರುವ ಜನರಿಗೆಲ್ಲಾ ತಾವು ಏನಾದರೂ ಮಾಡಿ ಎಲ್ಲಿರ ಕಣ್ಣಿಗೂ ಕಾಣಿಸಿಕೊಳ್ಳುವಂತಿರಬೇಕು ಎಂಬ ಹಪಹಪಿಕೆ ಇದ್ದಂತೆ ಕಾಣುತ್ತದೆ. ಅಂತಹವರಿಗೆ ಚಲಾವಣೆಯಲ್ಲಿರುವ ಪ್ರತಿಷ್ಠಿತರ ಹಿಂದೆ ಮುಂದೆ ಇರಲು ಅವರು ಬಯಸುತ್ತಾರೆ ಶಿವಾಯ್ ನಮ್ಮಂತಹವರು, ಒಂದು ಕಾಲದಲ್ಲಿ ಆತ್ಮೀಯರು ಆಗಿದ್ದ ನಾವು ಕಾಣುವುದಿಲ್ಲ. ನಾನೂ ಅದಕ್ಕೆ ಈಗ ಹೊಂದಿಕೊಂಡಿದ್ದೇನೆ. ಅವರಿಗೂ ಮುಜಗರವಾಗದಂತೆ ಸೈಡ್‍ವಿಂಗ್‍ಗೆ ತೆರಳಿದ್ದೇನೆ. 


ಕಳೆದವಾರದ ಓದು:
                                              ಖುಶವಂತ್ ಸಿಂಗ್‍ನ obslute kushawant ಓದಿದೆ. ಕೇವಲ ೧೮೬ ಪುಟಗಳಷ್ಟಿರುವ ಪುಸ್ತಕ ಮುಗಿಸಲು ವಾರವೇ ಬೇಕಾಯ್ತು. ನಡನಡುವೆ ಏನೇನೋ ಕೆಲಸಗಳು. ಈಗ ಕುಂವೀ ಸಮಗ್ರ ಕೈಗೆತ್ತಿಕೊಂಡಿದ್ದೇನೆ. ಇನ್ನು ಈ ತಿಂಗಳು ಚಿಂತಿಲ್ಲ.