ತಕಿಟ ತಕಿಟ ಧೋಂ

Friday, January 14, 2011

ಕಳೆದು ಹೋದ ವರುಷ

ಕಳೆದು ಹೋದ ವರುಷ

ಹೊಸ ವರುಷ ಪ್ರಾರಂಭವಾಯಿತು ಮತ್ತು ನಾವು ಮತ್ತೂ ಒಂದು ವರುಷವನ್ನು ನಮ್ಮ ಪ್ರಾಯಕ್ಕೆ ಸೇರಿಸಿಕೊಂಡೆವು. ಹೊಸ ವರುಷದ ಪ್ರಾರಂಭದಲ್ಲಿ ಹೊಸ ಪಾಪಗಳನ್ನು ಮಾಡುವುದಿಲ್ಲ ಎಂದು ಏನೇನೋ ನಿರ್ಥಾರಗಳನ್ನು ಮಾಡುತ್ತೇವೆ. ಒಂದೆರೆಡು ದಿನ ಅದರ ಅಮಲಿನಲ್ಲಿಯೇ ಇರುತ್ತೇವೆ. ದಿನ ಕಳೆದಂತೆ ಮತ್ತೆ ನಾಯಿಬಾಲ ಡೊಂಕೇ. ಹಾಗಾಗಿ ಹೊಸ ವರುಷಕ್ಕೆ ನನ್ನಿಂದ ಸಾಧ್ಯವಾಗದ ನಿರ್ಧಾರಗಳನ್ನು ಮಾಡುವುದನ್ನು ಬಿಟ್ಟಿದ್ದೇನೆ. ಇರುವಷ್ಟು ದಿನ ಅದೇ ಸಿಗರೇಟು ಮತ್ತು ಹೊಸ ಪುಸ್ತಕಗಳ ಸಂಗದಲ್ಲಿ ಕಳೆದರಾಯಿತು ಎನ್ನುವುದು ಸಧ್ಯದ ನಿರ್ಧಾರ.

ಕಳೆದ ಹೋದ ವರುಷದಲ್ಲಿ ನಾನು ಓದಿದ ಪುಸ್ತಕಗಳ ಸಮಗ್ರ ಪಟ್ಟಿಯನ್ನು ಇಲ್ಲಿ ಕೊಟ್ಟಿದ್ದೇನೆ. ಆವರಣದಲ್ಲಿರುವ ಸಂಖ್ಯೆ ಆ ಪುಸ್ತಕಗಳ ಪುಟಗಳ ಸಂಖ್ಯೆ. ಕೆಲವೆಡೆ ಆವರಣದಲ್ಲಿ "ಎ" ಎಂದು ಗುರುತು ಹಾಕಿದ್ದೇನೆ. ಅಂದರೆ ಅವು ಯಾರಿಂದಲೋ ಎರವಲು ತಂದ ಪುಸ್ತಕಗಳು. ಸ್ನೇಹಿತರು ಕೊಟ್ಟ ಪುಸ್ತಕಗಳು. ಉಳಿದೆಲ್ಲಾ ಪುಸ್ತಕಗಳು ಸ್ವಂತದ್ದು. ಮತ್ತು ದಾನ ನೀಡಲು ನಿರ್ಧಾರ ಮಾಡಿದ ಪುಸ್ತಕಗಳು. ಯಾರಿಗೆ ಬೇಕಾದರೂ ಕೊಟ್ಟು ಬಿಡುತ್ತೇನೆ . ಆದರೆ ತೆಗೆದುಕೊಳ್ಳುವರು ಮತ್ತು ಅದನ್ನು ಆಸಕ್ತಿಯಿಂದ ಓದುವವರು ಯಾರು?

ಪುಸ್ತಕಗಳ ಪಟ್ಟಿ.
೧. ತೊತ್ತೋಚಾನ್ (೧೫೪) ೨, ಕಥಾಸಮಯ -ಜೋಗಿ (೧೪೭)
೩. ಹೆಸರೇ ಬೇಡ -ಇಟ್ಟಿಗೆ ಸಿಮೆಂಟ್ ಪ್ರಕಾಶ ೪. ಜೋಗಿಮನೆ -ಜೋಗಿ (೨೨೪) ೫.ಆ ದಶಕ -ಶಾಮಣ್ಣ (೧೦೩) ೬. ಮಾಂಟೋ ಕಥೆಗಳು- ಜೆ.ಬಾಲಕೃಷ್ಣ (೧೦೭) ೭. ಮೋಹನ ಮುರಲಿ- ಎಸ್. ವಿದ್ಯಾಶಂಕರ್ (೨೮೪) ೮.ಮೃತ್ಯುಂಜಯ -ನಿರಂಜನ {೪೮೪(ಎ)} ೯. ಸಾಹಿತ್ಯಲೋಕದ ಸುತ್ತ ಮುತ್ತ -ಗಿರಡ್ಡಿ (೧೮೬) ೧೦. ಬದುಕು ಬದಲಿಸಿದ ಸ್ಕೂಟರ್ -ಗಣೇಶ್ ಅಮೀನಗಡ (೨೪೬) ೧೧ ಒಂದು ಸುಂದರ ಮನಸ್ಸು ಮತ್ತು ಇತರ ಬರಹಗಳು -ಅಲೂರು (೧೬೮) ೧೨. ಕೊಪೆನ್ ಹೇಗನ್ ಋತುಸಂಹಾರ -ನಾ.ಹೆಗಡೆ (೧೧೮) ೧೩. ಅಬಿವೃದ್ಧಿಯ ಅಂಧಯುಗ -ನಾ.ಹೆಗಡೆ (೧೫೬) ೧೪. ಟಿಪ್ಪು ಖಡ್ಗದ ನ್ಯಾನೊ ಕಾರ್ಬನ್-ನಾ.ಹೆಗಡೆ (೧೪೮) ೧೫. ನಾನು ಪಾಟೀಲ ಪುಟ್ಟಪ್ಪ (೨೬೬)-ಡಾ. ಸರಜೂ ಕಾಟ್ಕರ್ ೧೬.ಶಾಲ ಭಂಜಿಕೆ-ಗಣೇಶಯ್ಯ (೧೧೬)
೧೭. ಚಂದ್ರಗಿರಿ-ಸಾರಾಬಿನಂದನ {ಎ(೪೫೬)} ೧೮.ಕನ್ನಡದ ಅತಿ ಸಣ್ಣ ಕತೆಗಳು -ಸಂ-ಎ.ದಿವಾಕರ. (೧೯೨)
೧೯. ಧರ್ಮದ ಹೆಸರಿನಲ್ಲಿ -ಆರ್.ಬಿ.ಶ್ರೀಕುಮಾರ್/ಸಾರಾ (೮೮) ೨೦.ಝೆನ್- ಕೆ.ವಿ.ಸುಬ್ಬಣ್ಣ
೨೧. ಕೋಮುವಾದ: ಒಂದು ದರ್ಶನ-ರಾಮ್ ಪುನಿಯಾನಿ (೧೧೩)
೨೨. ಆರ್.ಕೆ.ನಾರಾಯಣ ಅವರ ಕತೆಗಳು:ಅನು.ಡಾ.ಆರ್ ಪೂರ್ಣಿಮಾ (೪೮) ೨೩. ನೆನಪುಗಳು-ಡಾ.ಪ್ರೊ.ವೈ.ಆರ್.ಮೋಹನ್ (೩೧೨)
೨೪. ಹರಿವ ನದಿ-ನಾ.ಡಿಸೋಜ {ಎ(೧೫೯)}
೨೫. ಸ್ವಾಮಿ ಮತ್ತು ಅವನ ಸ್ನೇಹಿತರು: ಅನು-ಹೆಚ್.ವೈ.ಶಾರದಾಪ್ರಸಾದ್ (೧೪೪)
೨೬. ಅರಿವಿನ ಆಡುಂಬೊಲ- ಹೆಚ್.ವೈ.ಶಾರದಾಪ್ರಸಾದ್ (೧೦೧) ೨೭, ಬೊಕಾಷಿಯೋನ ರಸಿಕತೆಗಳು- (೯೩)
೨೮. ಕರ್ವಾಲೋ-ತೇಜಸ್ವಿ. (೧೪೬) ೨೯. 11 minutes-Paulo Coelho (275)
೩೦. ಪಂಡಿತ್ ಭೀಮಸೇನ ಜೋಷಿ-ಅರವಿಂದ ಮುಳಗುಂದ (೧೫೧) ೩೨, ಉಡುಪಿಯ ಸಾಂಸ್ಕೃತಿಕ ಕಥನ- ಮುರಾರಿ ಬಲ್ಲಾಳ (೧೪೮)
೩೩. ೨೮ಹಣತೆಗಳು- ತೀರ್ಥರಾಮ ವಳಲಂಬೆ (೧೬೭) ೩೩. ೨೭ಹಣತೆಗಳು- ತೀರ್ಥರಾಮ ವಳಲಂಬೆ ೯೧೭೨)
೩೪. ಧ್ಯಾನ-ತೀರ್ಥರಾಮ ವಳಲಂಬೆ (೧೬೮) ೩೫. ದೇಶಕಾಲ ಬದುಕು ಮತ್ತು ದೇವರು-ತೀರ್ಥರಾಮ ವಳಲಂಬೆ (೧೭೨)
೩೬. ಪುನರ್ಜನ್ಮ ಮತ್ತು ಪುರುಷಾರ್ಥ -ತೀರ್ಥರಾಮ ವಳಲಂಬೆ (೧೭೬) ೩೭, ವಿಚಾರವಾದ ವಿಜ್ಞಾನ ಅಧ್ಯಾತ್ಮ -ತೀರ್ಥರಾಮ ವಳಲಂಬೆ (೧೭೨)
೩೮. ಭಾವ -೩ - ಮಾಸ್ತಿ. (೫೦೦) ೩೯ ಕೇಂದ್ರ ವೃತ್ತಾಂತ- ಯಶವಂತ ಚಿತ್ತಾಲ (೨೨೪)
೪೦. ರಕ್ಷಕ ಅನಾಥ- ವಸುದೇಂದ್ರ (೧೬೫) ೪೧. ಗೆರೆ ದಾಟಿದ ಮೇಲೆ-ಎಂ.ಎಸ್.ಪರಮಶಿವಮೂರ್ತಿ (೪೨೪)
೪೨. ಮನೆಮನಮಾತು: ನಾ ಕಾರಂತ ಪೆರಾಜೆ-(೬೪) ೪೩. ಯಶವಂತ ಚಿತ್ತಾಲ ಸಮಗ್ರ ಕಥೆಗಳು-೧
೪೪. ಯಶವಂತ ಚಿತ್ತಾಲ ಸಮಗ್ರ ಕಥೆಗಳು-೨ (೧೨೭೮) ೪೫. ಕವಲು- ಭೈರಪ್ಪ (೩೦೦)
೪೬. ಭಿತ್ತಿ-ಭೈರಪ್ಪ (೬೨೦) ೪೭. ತಂತು- ಭೈರಪ್ಪ (೯೦೮)
೪೮. ಸಾಕ್ಷಿ -ಭೈರಪ್ಪ (೪೧೪) 49. The music room- Namitha Devi Dayal {ಎ(310)}
೫೦. ಮಂದ್ರ- ಭೈರಪ್ಪ (೫೯೬) 51 ಜೀವನರಾಗ- ಸುಮಂಗಲಾ (೩೫೨)
೫೨.ದೂರ ಸರಿದರು- ಭೈರಪ್ಪ (೨೩೨) ೫೩. ತಲೆಗಳಿ- ವಿ.ಶಿ.ಶೀಗೆಹಳ್ಲಿ (೪೪೮)
೫೪. ತುಂಗಾ- ವಿ.ಗಾಯತ್ರಿ (೧೭೪) ೫೫. ಗಾಂಧೀ ಕ್ಲಾಸ್-ಕುಂ.ವೀ. (೩೯೦)
೫೬. ದೇವಕಾರು- ಸತೀಶ್ ಚಪ್ಪರಿಕೆ (೯೬) ೫೭. ಜನ್ನನ ಯಶೋಧರ ಚರಿತೆ ಪ್ರವೇಶ (೧೨೬)
೫೮. ಸೋಲಿಸಬೇಡ ಗೆಲಿಸಯ್ಯಾ- ಪ್ರೇಮಾ ಕಾರಂತ (೨೫೨) ೫೯.Haroun and the sea of sotries- Salman Rushdie (211) .೬೦ ಬಾನಯಾನ- ಕ್ಯಾ.ಗೋಪಿನಾಥ್.
೬೧ Absoulte Kushawant (186)
೬೨ ನೆನಪಿನ ಚಿತ್ರಗಳು- ಎಂ.ವೈ.ಘೋರ್ಪಡೆ. (೨೧೨)
೬೩ ಸಾರ್ಥ -ಭೈರಪ್ಪ. (೩೧೮)
೬೪ ವೆಂಡರ್ ಕಣ್ಣು -ಕೆ ಶಿವು (೧೨೩)
೬೫ ಕನ್ನಡದ ಈ ಲೋಕ- ಭವಾನಿಶಂಕರ್ (೯೪)
೬೬ ಎಣ್ಮಕಜೆ- ಮೂಲ ಅಂಬಿಕಾಸುತನ್, ಅನು: ಬಾಲಕೃಷ್ಣ. (೨೪೩)
೬೭ ಹಾವು ನಾವು- ಗುರುರಾಜ ಸನೀಲ್ (೧೯೪)
೬೮ The curious incident of the dog in the night time- Mark Haddon (272)
೬೯ Slum dog millionaire (Q &A)- Vikas Swaroop (382)
೭೦ ಮಿತ್ತಬೈಲು ಯಮುನಕ್ಕ -ಡೆ.ಕೆ.ಚೌಟ (೩೦೪)
೭೧ ಜರಾಸಂಧ-ಜೋಗಿ (೧೧೮)
೭೨ ಜೀವದನಿ- ಸರ್ಜಾಶಂಕರ ಹರಳೀಮಠ (೧೫೨)
೭೩ ಜೋಗಿಕಾಲಂ (೨೧೬)
೭೪ ಪಾಕಕ್ರಾಂತಿ -ತೇಜಸ್ವಿ (೮೯)
೭೫ ಕಾಸರಗೋಡಿನ ಸಣ್ಣಕತೆಗಳು (೩೫೩)
೭೬ ಕಾಮರಾಜ ಮಾರ್ಗ-ರವಿಬೆಳೆಗೆರೆ (೪೦೨)
೭೭ ರಥಬೀದಿ-ಶ್ರೀಧರ ಬಳೆಗಾರ (೧೫೩)
೭೮ ಗಂಗಾವತರಣ -ದಮಯಂತಿ ನರೇಗಲ್ಲ (೧೫೫)
೭೯ ನನ್ನ ಬದುಕಿನ ಹಾಡು -ಎನ್ಕೆ (೧೦೬)
೮೦ ಸತ್ಯದ ಹುಡುಕಾಟ-ಶ್ರೀಸದಾಶಿವಯೋಗಿ (೨೬೯)
೮೧ ಸಂಗೀತಸಂವಾದ-ಭಾಸ್ಕರ್ ಚಂದಾವರ್ಕರ್, ಅನು:ವೈದೇಹಿ (೨೦೨)
೮೨ ಸಂಗೀತತಪಸ್ಯಾ- ದತ್ತಾತ್ರೇಯ ಸದಾಶಿವಗರುಡ(೨೭೭)
೮೩ ಸಂಗೀತಸಮಯ -ಎಸ್.ಕೃಷ್ಣಮೂರ್ತಿ (೩೪೯)
೮೪ ಸಂಗೀತಸಾಮ್ರಾಜ್ಞಿ ಎಂ.ಎಸ್.ಸುಬ್ಬುಲಕ್ಷ್ಮಿ -ಸಾ.ಕೃ.ರಾಮಚಂದ್ರರಾವ್ (೧೦೬)
೮೫ ನಾ ಕಂಡ ಕಲಾವಿದರು-ವಾಸುದೇವಚಾರ್ಯರು (೧೩೫)
೮೬ ನನ್ನ ರಸಯಾತ್ರೆ-ಮಲ್ಲಿಕಾರ್ಜುನ ಮನ್ಸೂರ್ (೧೧೨)
೮೭, ರಂಗಕೋಗಿಲೆ ಜುಬೇದಾಬಾಯಿ -ವೀಣಾ ಕುಲಕರ್ಣಿ (೮೬)
೮೮.ನೆನಪುಗಳು- ವಾಸುದೇವಾಚಾರ್ಯರು (೧೦೯)
೮೯. ಸಂಗೀತ ರಸನಿಮಿಷಗಳು ;ಜಿ.ಟಿ.ನಾರಾಯಣರಾವ್ (೧೭೬).

Sunday, January 9, 2011

ಜಾತ್ರೆಯ ದಿನಗಳು

ಜಾತ್ರೆಯ ದಿನಗಳು

ಜಾತ್ರೆ ಮುಗಿದು ಎರಡು ದಿನಗಳು ಕಳೆದಿವೆ. ಊರು ಇನ್ನೂ ಅದರ ಅಮಲಿನಲ್ಲಿಯೇ ಇದೆ. ಸಂಜೆಯ ಹೊತ್ತು ಜನ ಇನ್ನೂ ತಿರುಗಾಡುತ್ತಿದ್ದಾರೆ. ದೋಸೆ ಕ್ಯಾಂಪಿಗೆ ಭರ್ಜರಿ ವ್ಯಾಪಾರ ಆಗುತ್ತಿದೆ. ಇನ್ನು ಒಂದು ವಾರದಲ್ಲಿ ಸಂಕ್ರಮಣದ ರಥೋತ್ಸವವಿದೆ. ಅಲ್ಲಿಯವರೆಗೆ ಬಹುಷಃ ಇದೇ ಗುಂಗಿನಲ್ಲಿ ಜನರು ಇರಬಹುದೇನೋ. ನನ್ನೂರಿನ ಮಕ್ಕಳು ಕಾಯುವುದೆಂದರೆ ಮಳೆಗಾಲದಲ್ಲಿ ಜೋರಾಗಿ ಮಳೆ ಬಂದು ರಾಮಮಂಟಪ ಮುಳಗಬೇಕು. ಅಂದರೆ ರಜೆ ಗ್ಯಾರಂಟಿ. ಮತ್ತು ಎಳ್ಳಾಮಾವಾಸ್ಯೆಯ ಜಾತ್ರೆಗೆ. ಎರಡೂ ಲಾಭದಾಯಕ ದಿನಗಳೇ. ಮಳೆಗಾಲದ ರಜೆ ಸಿಕ್ಕಾಗ ನೆರೆ ಬಂದಕಡೆಯಲ್ಲಿ ತಿರಬಹುದು. ನೀರು ಎಷ್ಟು ಬಂದಿದೆ ಎಂದು ಅಲ್ಲಿಂದಿಲ್ಲಿಗೆ ಓಡಾಡಿಕೊಂಡಿರಬಹುದು. ಇಂತಹ ದಿನವೂ ಜಾತ್ರೆಯ ದಿನವಿದ್ದಂತೆ. ಊರಿನ ಎಲ್ಲಾ ಜನರೂ ತಮ್ಮ ವಾಹನಗಳನ್ನೇರಿ ತಿರುಗಾಡುತ್ತಿರುತ್ತಾರೆ.  ನೆರೆಯಿಂದಾಗಿ ಊರಿನ ಸಂಪರ್ಕರಸ್ತೆಗಳೆಲ್ಲವೂ ಮುಚ್ಚಿಹೋದರೂ ಚಕ್ರವ್ಯೂಹದಲ್ಲಿ ತಿರುಗಿದಂತೆ ನಾವೂ ಊರು ತುಂಬಾ ತಿರುಗುತ್ತಿರುತ್ತೇವೆ. ಈ ಬಾರಿ ಮಳೆಗಾಲ ಕೈಕೊಟ್ಟಿತು. ಮಳೆ ಬಂದರೂ ರಾಮಮಂಟಪ ಮುಳಗಲೇ ಇಲ್ಲ. ಹುಡುಗರ ಬೇಸರಕ್ಕೆ ಮಿತಿಯೇ ಇರಲಿಲ್ಲ.

ಜಾತ್ರೆ ಈ ಬಾರಿ ಕೈಕೊಡಲಿಲ್ಲ. ಗಾಢವಲ್ಲದ ಆದರೆ ಹಿತವಾದ ಚಳಿಯಿತ್ತು. ಅಮಾವಾಸ್ಯೆಯದಿನ ಪವಿತ್ರ ಸ್ನಾನಕ್ಕಾಗಿ ಜನ ಸಾಲುಸಾಲಾಗಿ ನಿಂತುಕೊಂಡಿದ್ದರು. ನನ್ನೂರಿಗೆ ಒಂದು ಪೌರಾಣಿಕ ಹಿನ್ನೆಲೆಯಿದೆ. ತಂದೆಯ ಆಜ್ಞೆಯಂತೆ ತನ್ನ ತಾಯಿಯ ತಲೆಕಡಿದ ಪರುಶರಾಮನಿಗೆ ಪಾಪಪ್ರಜ್ಞೆ ಬಂದಿತಂತೆ . ಮೇಲಾಗಿ ಅವನ ಕೊಡಲಿಗೆ ಅಂಟಿಕೊಂಡಿದ್ದ ರಕ್ತ ಯಾವ ನದಿಯ ನೀರಿನಿಂದಲೂ ತೊಳೆಯಲಾಗಲಿಲ್ಲವಂತೆ. ತಿರುಗುತ್ತಾ ತಿರುಗುತ್ತಾ ಎಳ್ಳಾಮಾವಾಸ್ಯೆಯ ದಿನ ನನ್ನೂರಿಗೆ ಬಂದು ಅಲ್ಲಿ ಕೊಡಲಿಯನ್ನು ತೊಳೆದಾಗ  ಅಂಟಿಕೊಂಡಿದ್ದ ರಕ್ತವೆಲ್ಲಾ ತೊಳೆದುಹೋಗಿ ಶುಭ್ರವಾಗಿ ಹೊಳೆಯಿತಂತೆ. ಅಲ್ಲೇ ಒಂದು ಶಿವಲಿಂಗವನ್ನು ಸ್ಥಾಪಿಸಿ , ಪೂಜೆಮಾಡಿದನಂತೆ ಪರುಶರಾಮ. ಆ ಸ್ಠಳವೀಗ ರಾಮಕುಂಡವೆಂದು ಪ್ರಸಿದ್ಧವಾಗಿದೆ. ಅಲ್ಲೇ ಇರುವ ಶಿವಲಿಂಗಕ್ಕೆ ಒಂದು ಮಂಟಪ ಕಟ್ಟಲಾಗಿದೆ. ರಾಮಮಂಟಪವೆಂದು ಇದರ ಹೆಸರು. ನದಿಯ ದಡದಲ್ಲಿಯೇ ಶ್ರೀ ರಾಮೇಶ್ವರ ದೇವಸ್ಠಾನವಿದೆ. ಈ ದೇವರಿಗೆ ರಥೋತ್ಸವದ ಸಂಭ್ರಮ ಎಳ್ಳಾಮಾವಾಸ್ಯೆಯ ಮರುದಿನ.
ಅಮಾವಾಸ್ಯೆಯದಿನ ಸ್ನಾನ. ಆ ದಿನ ಅಲ್ಲಿ ಸ್ನಾನ ಮಾಡಿದರೆ ಆವರೆಗಿನ ಪಾಪಗಳೆಲ್ಲವೂ ಪರಿಹಾರವಾಗಿ ಹೊಸ ಪಾಪಗಳನ್ನು ಮಾಡಲು ಪ್ರಾರಂಭಿಸಬಹುದಂತೆ. ಮಾರನೆಯ ದಿನ ರಥೋತ್ಸವ. ಮೂರನೇಯ ದಿನ ತೆಪ್ಪೋತ್ಸವ. ಎರಡು ದೋಣಿಗಳನ್ನು ಕಟ್ಟಿ ಅದರಲ್ಲಿ ದೇವರ ಮೂರ್ತಿಯನ್ನಿಟ್ಟು ಆ ದಡಕ್ಕೆ ಏಳು ಸುತ್ತು ತಿರುಗಿ ಹೋಗುತ್ತದೆ. ಅಲ್ಲಿ ಪೂಜೆ ಸ್ವೀಕರಿಸಿ ಮತ್ತೆ ಏಳು ಸುತ್ತು ತಿರುಗಿ ಮೂಲದಡಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಎರಡೂ ದಡದ ಮೇಲಿರುವ ಗಿಡಮರಗಳಿಗೆಲ್ಲಾ ವಿದ್ಯುತ್ ದೀಪಗಳ ಅಲಂಕಾರ. ಅದರಂತೆ ಸೇತುವೆಗೂ ಕೂಡ. ಜತೆಗೆ ಸುಮಾರು ಒಂದು ಲಕ್ಷರೂಪಾಯಿಗಳಷ್ಟು ಸಿಡಿಮದ್ದುಗಳನ್ನು ಸುಡುತ್ತಾರೆ. ಇದನ್ನು ನೋಡಲು ನದಿಯ ಎರಡೂ ದಡಗಳಲ್ಲಿ ಕಾಲಿಡಲು ಸಾಧ್ಯವಿಲ್ಲದಂತೆ ಜನ ಸೇರಿರುತ್ತಾರೆ. ಊರಿನ ಜನರಷ್ಟೇ ಅಲ್ಲದೆ ಶೃಂಗೇರಿ ಶಿವಮೊಗ್ಗ ಮೊದಲಾದ ಕಡೆಗಳಿಂದ ಸಾವಿರಾರು ಜನ ಬಂದು ಸೇರುತ್ತಾರೆ. ನನ್ನ ರಥಬೀದಿ ರಾತ್ರೆ ಎರಡು ಗಂಟೆಯಾದರೂ ವಿಶ್ರಮಿಸಿಕೊಳ್ಳದೆ ಚಟುವಟಿಕೆಗಳಿಂದ ಕೂಡಿರುತ್ತದೆ.

ಊರು ಕೆಲವು ಸತ್ ಸಂಪ್ರದಾಯಗಳನ್ನು ರೂಡಿಸಿಕೊಂಡಿದೆ. ಪರಸ್ಠಳದಿಂದ ಬರುವ ಜನರಿಗೆ ಅನುಕೂಲವಾಗಲಿ ಎಂದು ಈ ಮೂರುದಿನಗಳಲ್ಲಿ ಉಚಿತ ಊಟವನ್ನು ದೇವಸ್ಥಾನದ ಬಳಿ ಒದಗಿಸುತ್ತಿದೆ. ಇದಕ್ಕೆ ಜನ ಕೈತುಂಬಾ ಧಾರಾಳವಾಗಿ ದಾನ ನೀಡುತ್ತಾರೆ. ಹೋಟೆಲಿನಲ್ಲಿ ಅಧಿಕ ಹಣಕೊಟ್ಟು ಊಟ ಮಾಡುವುದಕ್ಕಿಂತ ಈ ಊಟ ಎಷ್ಟೋ ಮೇಲಾಗಿರುತ್ತದೆ. ರಥೋತ್ಸವದ ದಿನ ಸುಮಾರು ಆರುಸಾವಿರದಷ್ಟು ಜನ ಊಟ ಮಾಡಿದ್ದಾರೆ.  ನಡು ,ಮಧ್ಯಾಹ್ನದ ಹೊತ್ತು ಅಲ್ಲಲ್ಲಿ ಉಚಿತ ಪಾನಕ ಸೇವೆಯನ್ನು ಕೆಲವರು ಏರ್ಪಡಿಸುತ್ತಾರೆ. ಶುದ್ಧವಾದ ನೀರಿನಿಂದ ಬೆಲ್ಲ, ಕಾಳಮೆಣಸು ಹಾಕಿ ಹೊಟ್ಟೆಗೆ ತಂಪಾಗುವ ಹಾಗೆ ರಸ್ತೆಯಲ್ಲಿ ಹೋಗಿಬರುವವರಿಗೆಲ್ಲರಿಗೂ ಒತ್ತಾಯ ಪೂರ್ವಕವಾಗಿ ಕುಡಿಸುತ್ತಾರೆ. ಇಂತಹ ಪಾನಕಸೇವಾ ಕೇಂದ್ರಗಳು ಈ ಬಾರಿ ಮೂರು ಇತ್ತು.

ದಾರಿಯುದ್ದಕ್ಕೂ ವ್ಯಾಪಾರಿಗಳ ಅರಚಾಟ, ಚಿಕ್ಕಮಕ್ಕಳ ಕೈಯಲ್ಲಿ ಇದ್ದ ಪೀಪಿಗಳ ಶಬ್ದಗಳಿಂದ ಕಿವಿ ಕಿವುಡಾಗಿ ಹೋಗುತ್ತದೆ. ಆದರೆ ಜಾತ್ರೆಯೆಂದರೆ ಇದೇ ಗೌಜಿ ಗದ್ದಲದ ಗೂಡಲ್ಲವೇ. ಇಂತಹ ಸಮಯದಲ್ಲಿ ಶಬ್ದಕ್ಕೆ ಅಂಜಿದೊಡೆ ಎಂತಯ್ಯಾ. ನಾನಂತೂ ಮೊಮ್ಮಗನ ಜತೆಯಲ್ಲಿ ಎಷ್ಟು ಬಾರಿ ತಿರುಗಿದ್ದೇನೆ ಎಂದು ಲೆಕ್ಕವಿಟ್ಟಿಲ್ಲ. ಈಗ ರಥ ಮೌನವಾಗಿ ಗಂಭೀರವಾಗಿ ತನ್ನ ಕೊಟ್ಟಿಗೆಯಲ್ಲಿ ನಿಂತುಕೊಂಡಿದೆ. ರಥಬೀದಿಯಲ್ಲಿ ಹರಡಿಕೊಂಡಿದ್ದ ಅಂಗಡಿಗಳು ಬೇರೆ ಊರಿಗೆ ಹೋಗಿವೆ. ಜನಸಂಚಾರ ಮೊದಲಿನ ಹಾಗೆ ಇಲ್ಲದಿದ್ದರೂ ಮಾಮೂಲಿಯಾಗಿಲ್ಲ. ಇನ್ನೂ ಇರುವ ಅಂಗಡಿಗಳಲ್ಲಿ ಜನಸೇರುತ್ತಿದ್ದಾರೆ. ದೋಸೆ ಕ್ಯಾಂಪಿಗೆ ಮುತ್ತಿಕ್ಕುವ ಜನ ಇನ್ನೂ ಕಡಮೆಯಾಗಿಲ್ಲ. ಮತ್ತೆ ನನ್ನ ರಥಬೀದಿ ಮದುವಣಗಿತ್ತಿಯಂತೆ ಸಂಭ್ರಮಿಸಬೇಕಾದರೆ ಇನ್ನೂ ಹನ್ನೊಂದು ತಿಂಗಳು ಕಾಯಬೇಕು. ಈ ಬಾರಿ ಡಿಸೆಂಬರ್ ೨೫ಕ್ಕೆ ಎಳ್ಳಾಮಾವಾಸ್ಯೆ. ಅಲ್ಲಿಯವರೆಗೆ ಮೆಲಕು ಹಾಕುತ್ತಲೇ ಇರಬೇಕು ಮತ್ತು ಇನ್ನೂ ಒಂದು ರಥೋತ್ಸವಕ್ಕೆ ಕಾಯಬೇಕು. ಕಾಯವುದರಲ್ಲಿಯೇ ಸೊಗಸಿದೆ.

Saturday, January 1, 2011

ಕುವೆಂಪು -೧೦೬

ಕಳೆದ ವಾರ ೨೯ರಂದು ಕುವೆಂಪುರವರ ೧೦೬ರ ಜನ್ಮ ದಿನದ ಆಚರಣೆಯ ಸಂಭ್ರಮ ಕುಪ್ಪಳಿಯಲ್ಲಿ ನಡೆಯಿತು. ಬೆಳಿಗ್ಯೆ ಹತ್ತೂವರೆಗೆ ಕುವೆಂಪು ಸಮಾಧಿಗೆ ಪುಷ್ಪಾರ್ಚನೆಯಾದನಂತರ ಹೇಮಾಂಗಣದಲ್ಲಿ ಸಭೆ ನಡೆಯಿತು. ಚಂಪಾ, ಡಾ.ಮೋಹನ ಆಳ್ವ. ಬಾರಿ, ಕುಲಪತಿಗಳು, ಕುವೆಂಪು ವಿವಿ ಮೊದಲಾದವರು ಉಪಸ್ಥಿತರಿದ್ದರು. ಕುವೆಂಪು ಪ್ರತಿಷ್ಠಾನದ ಸಹಕಾರ್ಯದರ್ಶಿ ಕಡಿದಾಳು ಪ್ರಕಾಶ ಸ್ವಾಗತ ಮಾಡಿದರು. ಕಡಿದಾಳು ಪ್ರಕಾಶ ಮಿತಭಾಷಿ ಮತ್ತು ಜೇನ್ನೊಣದಂತೆ ಕೆಲಸಮಾಡುವವರು. ಸ್ವಾಗತವಾಗಲೀ  ಅಥವಾ ಬೇರೆ ಭಾಷಣವಾಗಲೀ ಹೆಚ್ಚು ಮಾತನಾಡುವವರಲ್ಲ. ಹಾಗಾಗಿ ಅವರ ಮಾತು ಕೇಳಲು ಹಿತವಾಗುತ್ತದೆ. ಉದ್ಘಾಟನಾ ಭಾಷಣ ಮಾಡಿದ ಚಂಪಾ ಎಂದಿನ ಶೈಲಿಯಲ್ಲಿ ವ್ಯಂಗ್ಯ ಮೊನಚುಗಳಿಂದಲೇ ಮಾತು ಪ್ರಾರಂಭಿಸಿದರು. ಅನಗತ್ಯವಾಗಿ ಲೋಕದ ಕುರಿತು ಟೀಕೆಗಳನ್ನು ಮಾಡಿದರು. ಜ್ಞಾನಪೀಠ ಪ್ರಶಸ್ತಿ ಪಡೆದವರ ಬಗ್ಗೆ ಪಡೆದವರು ಮತ್ತು ಹೊಡೆದುಕೊಂಡವರು ಎಂದು ವ್ಯಂಗ್ಯದ ಮಾತನ್ನಾಡಿದರು. ಆಳ್ವರು ಶಿಸ್ತಿನಿಂದ ಭಾಷಣವನ್ನು ಬರೆದುಕೊಂಡು ಬಂದಿದ್ದು ಅದನ್ನು ಚೆನ್ನಾಗಿಯೇ ಓದಿದರು. ಪ್ರತಿ ವರ್ಷವೂ ತನ್ನ ವಿದ್ಯಾರ್ಥಿಗಳನ್ನು ಒಮ್ಮೆ ಇಲ್ಲಿಗೆ ಕರೆದುಕೊಂಡು ಬರುತ್ತೇನೆ ಎಂದು ಆಶ್ವಾಸನೆ ನೀಡಿದರು. ಬಾರಿ, ಕುಲಪತಿಗಳು ಕುವೆಂಪು ವಿವಿ, ಕನ್ನಡದಲ್ಲಿ ಸ್ವಲ್ಪ ಕಷ್ಟದಿಂದ ಮಾತನಾಡಿದರು. ಆದರೆ ಹಿಂದಿನ ಕುಲಪತಿಗಳಿಗಿಂತ ಚೆನ್ನಾಗಿಯೇ ಮಾತನಾಡಿದರು. ಅವರ ಸ್ಥಾನಮಾನಕ್ಕನುಗುಣವಾಗಿ ಅವರಿಗೆ ಮಾತನಾಡಲು ಅವಕಾಶ ಸಿಕ್ಕಿತ್ತು. ಕುವೆಂಪುರವರ ಕುರಿತು ಫ್ರೌಡ ಪ್ರಬಂಧ ಬರೆದ ಸುಮಾರು ೧೭ ಜನರಿಗೆ ಸನ್ಮಾನ ಮಾಡಿ ಗೌರವಿಸಿದರು. ಪ್ರೊ.ಹೆಚ್.ಜೆ.ಲಕ್ಕಪ್ಪ ಗೌಡ, ಮಳಲಿ ವಸಂತ ಕುಮಾರ‍್ರಿಂದ ಪ್ರಾರಂಭಿಸಿ ಸುಮಾರು ೧೭ ಜನರಿದ್ದರು.

ಮಧ್ಯಾಹ್ನದ ಗೋಷ್ಠಿ ಮಾತ್ರ ನನಗೆ ಹಿಂಸೆಯನ್ನೇ ನೀಡಿತು. ಬಹುಶಃ ಕಳೆದ ಎರಡು ವರ್ಷಗಳಿಂದ ಇಂತಹ ಸೆಮಿ ನಾರುಗಳಿಗೆ  ನಾನು ಹಾಜರಾಗದೇ ಇರುವುದು ಕಾರಣವೇನೋ. ಮನುಶ್ಯರಿಗೆ ಅರ್ಥವಾಗುವ ಹಾಗೆ ಮಾತನಾಡದೇ, ಎಂದಿನ ಸೆಮಿನಾರ್ ಭಾಷೆಯಲ್ಲಿ ಮಾತನಾಡಿದ್ದು ಮತ್ತೂ ಒಂದು ಕಾರಣ. ಇದು ನನ್ನ ದೋಷವೂ ಇರಬಹುದು. ಸಹಜವಾಗಿ ಸರಳವಾಗಿ ಮಾತನಾಡುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲವಲ್ಲ ಎಂದು ಆಶ್ಚರ್ಯವೂ ಆಯಿತು.

ಮನಸ್ಸಿಗೆ ಬಹಳ ಸಂತೋಷವನ್ನು ನೀಡಿದ ಕಾರ್ಯಕ್ರಮವೆಂದರೆ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ. ಹೊಸಬಾಳೆ ಸೀತಾರಾಮರಾಯರು ಸುಮಾರು ಹದಿನೈದು ನಿಮಿಷಗಳ ಕಾಲ ರಾಮಾಯಣ ದರ್ಶನಂ ವನ್ನು ಗಮಕ ರೀತಿಯಲ್ಲಿ ಹಾಡಿ ತೋರಿಸಿದರು. ಅವರಿಗೆ ಈಗ ೮೧ರ ಪ್ರಾಯ. ನೆನಪು ಮಾತ್ರ ಗಟ್ಟಿಯಾಗಿದೆ. ಕಣ್ಣೆದುರು ಕೃತಿಯನ್ನು ಇಟ್ಟುಕೊಳ್ಳದೆ ಕೇವಲ ಸ್ಮೃತಿಯಿಂದಲೇ ಹಾಡಿದ್ದು ನನಗೆ ವಿಶೇಷವಾಗಿ ಕಂಡಿತು. ಅನಂತರ ಬೆಂಗಳೂರಿನ ಕಲಾತೀರ ಸಂಸ್ಠೆಯ ಉದಯಕುಮಾರ್ ಶೆಟ್ಟಿಯವರಿಂದ ಕುವೆಂಪು ಗೀತ ನೃತ್ಯ ಕಾರ್ಯಕ್ರಮ ನಡೆಯಿತು. ಸುಮಾರು ಎಂಟು ಹಾಡುಗಳಿಗೆ ನೃತ್ಯವನ್ನು ಅಳವಡಿಸಿದ್ದರು. ಬಹಳ ಚೆನ್ನಾಗಿ ಮೂಡಿಬಂದಿತ್ತು.

ಈಗ ಈ ವಾರ ನನ್ನ ರಥಬೀದಿಯಲ್ಲಿ ಜಾತ್ರೆಯ ಗೌಜಿ. ಕೊಟ್ಟಿಗೆಯಲ್ಲಿದ್ದ ರಥ ಹೊರಗೆ ಬಂದಿದೆ. ಅದಕ್ಕೆ ಬಾವುಟಗಳನ್ನು ಏರಿಸುತ್ತಿದ್ದಾರೆ. ರಥಬೀದಿಯ ಎರಡೂ ಬದಿಯಲ್ಲಿ ಅಂಗಡಿಗಳನ್ನು ಇಡಲು ಎಲ್ಲಿಂದಲೋ ವ್ಯಾಪಾರಿಗಳು ತುಂಬು ನಿರೀಕ್ಷೆಯನ್ನು ಇಟ್ಟುಕೊಂಡು ತಮ್ಮ ವಸ್ತುಗಳನ್ನು ಹೊಂದಿಸಿ ಇಡುತ್ತಿದ್ದಾರೆ. ಇನ್ನೆರೆಡು ದಿನಗಳಲ್ಲಿ ರಸ್ತೆಯಲ್ಲಿ ಕಾಲಿಡಲು ತೆರಪಿಲ್ಲದಂತೆ ಜನ ಸೇರುತ್ತಾರೆ. ವರ್ಷಕ್ಕೊಮ್ಮೆ ಬರುವ ಜಾತ್ರೆಯಲ್ಲಿ ನಾನೂ ನನ್ನ ಮೊಮ್ಮಗನೂ ತಿರುಗಬೇಕು. ಮಗು ಕಣ್ಣತುಂಬಾ ಆಸೆಯನ್ನಿಟ್ಟುಕೊಂಡು ಕಾಯುತ್ತಿದೆ.

ವಾರದ ಓದು:೧. ನೆನಪುಗಳು: ವಾಸುದೇವಾಚಾರ್ಯ (ಪು೧೦೯) ಮತ್ತು ಸಂಗೀತ ರಸನಿಮಿಷಗಳು -ಜಿಟಿನಾ(ಪು೧೭೫)

Thursday, December 30, 2010

ತಕಿಟ ತಕಿಟ ಧೋಂ 


ಕಳೆದ ವಾರ ಹೀಗೆ ಸುಮ್ಮನೇ ಕರಗಿಹೋಗಿಲ್ಲವೆನ್ನುವುದೇ ಒಂದು ಸಮಾಧಾನ. ಇಲ್ಲಿ ನನ್ನೂರಿನಲ್ಲಿ ಅಂತಹ ಹೇಳಿಕೊಳ್ಳುವ ಕಾರ್ಯಕ್ರಮಗಳು ನಡೆಯುವುದೇ ವಿರಳ. ಚಾತಕ ಪಕ್ಷಿಯಂತೆ ಎಲ್ಲಿಯಾದರೂ ಯಾವುದಾದರೂ ಒಳ್ಳೆಯ ಕಾರ್ಯಕ್ರಮಗಳು ನಡೆಯಬಹುದೇ ಎಂದು ಕಣ್ಣು ಕಿವಿಗಳು ಹಪಹಪಿಸುತ್ತಿರುತ್ತವೆ. ಏನೂ ಇಲ್ಲದೆಯೂ ಬದುಕಬಹುದು ಎನ್ನುವುದು ಸತ್ಯ. ಆದರೂ ಮನಸ್ಸಿಗೆ ಕೆಲವೊಮ್ಮೆ ಬೇಸರ ಕವಿದುಕೊಂಡಾಗ , ಈ ಮಬ್ಬನ್ನು ಕಳೆಯುವ ಯಾವುದಾದರೂ ಒಂದು ಏನಾದರೂ  ಒಂದರ ಅಗತ್ಯವಿರುತ್ತದೆ. ಈ ವಾರ ಅಂತಹದೊಂದು ಅವಕಾಶ ಒದಗಿ ಬಂದಿತು. 


ಓಡಿಹೋದ ಚಳಿ ಮತ್ತೆ ಕಾಣಿಸಿಕೊಳ್ಳುತ್ತಿದೆ. ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡಂತೆ ಅಲ್ಲ  .ಮೈಯನ್ನು ಗಡಗಡ ನಡುಗಿಸುವ ಚಳಿ ಕಾಣಿಸಿಕೊಂಡಿಲ್ಲ. ಆದರೆ ಇದೆ. ಸಂಜೆಯಾಗುತ್ತಲೇ ದೇಹವಿಡೀ ತಂಪಾಗುವ ಹಾಗೆ., ಮನೆಯ ನೆಲವೆಲ್ಲಾ ತಣ್ಣಗಾಗುವ ಹಾಗೆ, ಚಳಿ ಕಾಣಿಸಿಕೊಂಡಿದೆ. ಕಂಬಳಿ ಹೊದ್ದು ಮಲಗುವ ಅಭ್ಯಾಸವೇ ಇಲ್ಲದ ನಾನು ಈಗ ಅದನ್ನು ದಿನನಿತ್ಯ ಹೊದ್ದು ಮಲಗಬೇಕಾಗಿದೆ. ಇಬ್ಬನಿ ಮಾತ್ರ ಕಾಣಿಸುತ್ತಿಲ್ಲ. ಇಬ್ಬನಿ ಇಲ್ಲದಿದ್ದರೆ ಮುಂದಿನ ವರುಷ ಮಳೆ ಕಡಮೆಯಾಗುವುದಂತೆ. 


ಮೊನ್ನೆ ಬುಧವಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಒಂದು ಅಪೂರ್ವವಾದ ಕಾರ್ಯಕ್ರಮ ನಡೆಯಿತು. ಇಲ್ಲಿನ ಏಕತಾನತೆಗೆ ಬೇಸತ್ತು ಗೆಳೆಯರೊಡನೆ ಕಾರಿನಲ್ಲಿ ಅಲ್ಲಿಗೆ ಹೊರಟೆವು. ಸುಮಾರು ಇಪ್ಪತ್ತೆರೆಡು ತಬಲಾ ವಾದಕರು ಒಂದೇ ವೇದಿಕೆಯಲ್ಲಿ ತಮ್ಮ ಕಲಾ ಪ್ರದರ್ಶನವನ್ನು ನೀಡುವ ಕಾರ್ಯಕ್ರಮ "ತಬಲಾ ಫೀಲಿಯಾ". ಸದ್ಯಕ್ಕೆ ಅಮೆರಿಕಾದಲ್ಲಿರುವ ಸಮೀರ್ ಚಟರ್ಜಿ ತಮ್ಮ ಎಲ್ಲಾ ಶಿಷ್ಯರನ್ನು ಕರೆದುಕೊಂಡು ಬಂದು ಈ ಕಾರ್ಯಕ್ರಮ ನೀಡಿದ್ದರು. ಇವರಲ್ಲಿ ಎಂಟು ಜನ ವಿದೇಶಿಯರು, ಎಂಟು ಜನ ಪಶ್ಚಿಮ ಬಂಗಾಳದವರು ಮತ್ತು ಉಳಿದ ಆರು ಜನ ನಮ್ಮ ಕನ್ನಡಿಗರು. ಮೂರು ಸಾಲಿನಲ್ಲಿ ಕುಳಿತು ವಿಶಿಷ್ಟವಾದ ಸಂಗೀತ ಸಂಯೋಜನೆಯಿಂದ ಅದ್ಭುತವಾದ ಕಾರ್ಯಕ್ರಮ ನೀಡಿದರು. ಪ್ರಾರಂಭದಲ್ಲಿ ಶ್ರೀ ಅಶೋಕ ಹುಗ್ಗಣ್ಣವರ‍್ರವರ ಮತ್ತು ಶ್ರೀಮತಿ ಪಿಯು ಚಟರ್ಜಿಯವರ ಸಂಗೀತ ಕಾರ್ಯಕ್ರಮವಿತ್ತು. ನಂತರ ಒಂದು ಗಂಟೆಯ ಕಾಲ ತಬಲಾ ವಾದನ. ಮನುಷ್ಯನ ಬದುಕಿನ ನಾಲ್ಕು ಅವಸ್ಥೆಗಳಾದ -ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸವೆಂಬ ಈ ನಾಲ್ಕು ಅವಸ್ಥೆಗಳನ್ನು ಸಂಗೀತದಲ್ಲಿ ಅಳವಡಿಸಿಕೊಂಡು ವಿಭಿನ್ನ ಸ್ವರಗಳಿಂದ ಅದನ್ನು ಮನದಟ್ಟಾಗುವಂತೆ ಕಾರ್ಯಕ್ರಮವನ್ನು ರೂಪಿಸಿದ್ದರು. ಆಶ್ಚರ್ಯವೆಂದರೆ ಪ್ರತಿಯೊಬ್ಬರ ಬಳಿಯಿದ್ದ ಒಂದೊಂದು ತಬಲಾವೂ ಒಂದೊಂದು ರೀತಿಯ ನಾದವನ್ನು ಹೊರಡಿಸುತ್ತಿತ್ತು. ಹಿನ್ನಲೆಯಲ್ಲಿ ಇಬ್ಬರು ಗಾಯಕಿಯರು ಮತ್ತು ಇಬ್ಬರು ಗಾಯಕರು ಸಹಕರಿಸಿದ್ದರು. ಉಪನಿಷತ್ತಿನ ಕೆಲವು ಶ್ಲೋಕಗಳನ್ನು  ಮತ್ತು ಆಲಾಪನೆಯನ್ನು  ಹಿತವಾಗಿ ಹಾಡುತ್ತಿದ್ದರು.   ಅಲ್ಲಿ ಕಳೆದ ಮೂರುಗಂಟೆ ವ್ಯರ್ಥವಾಗಲಿಲ್ಲವೆಂದೆನಿಸಿತು.  


ಮುಂದಿನ ವಾರ ನಮ್ಮ ಕುಪ್ಪಳ್ಳಿಗೆ ಹೋಗಬೇಕು.  ಕುವೆಂಪು ಹಬ್ಬವಿದೆ. (ಡಿ.೨೯ ಮತ್ತು ೩೦)


ಕಳೆದವಾರದ ಓದು. :೧. ಸಂಗೀತ ಜೀವನ ತಪಸ್ಯಾ: ದ.ಸ.ಗರುಡ .(೨೭೭ಪು). ೨. ಸಂಗೀತ ಸಮಯ : ಎಸ್.ಕೃಷ್ಣಮೂರ್ತಿ. (೩೪೯ಪು) . ೩. ಸಂಗೀತ ಸಾಮ್ರಾಜ್ಞಿ ಎಂ.ಎಸ್-ಸಾಕೃರಾಮಚಂದ್ರರಾವ್ (೧೦೬) ೪, ನಾ ಕಂಡ ಕಲಾವಿದರು-ವಾಸುದೇವಾಚಾರ್ಯ (೧೩೫ಪು) ೫, ನನ್ನ ರಸಯಾತ್ರೆ- ಮಲ್ಲಿಕಾರ್ಜುನ್ ಮನ್ಸೂರ್ (೧೧೨ಪು)

Friday, December 17, 2010

ಕಾಣದಂತೆ ಮಾಯವಾಯಿತು- ಚಳಿ

ಕಾಣದಂತೆ ಮಾಯವಾಯಿತು- ಚಳಿ.


ಈಗ ಹತ್ತು ಹನ್ನೆರೆಡು ದಿನಗಳಿಂದ ನನ್ನೂರಿಗೆ ಮಳೆಯಿಂದ ಮುಕ್ತಿ ಸಿಕ್ಕಿದೆ. ಕೃಷಿಕರೆಲ್ಲರೂ ನೆಮ್ಮದಿಯಿಂದ ತಮ್ಮ ಅಡಿಕೆ ಮತ್ತು ಗದ್ದೆಯ ಕೆಲಸಗಳಲ್ಲಿ ತೊಡಗಿದ್ದಾರೆ. ಚಳಿಗಾಲದ ಆರಂಭದ ದಿನಗಳಲ್ಲಿ ಬೆಳಿಗ್ಗೆ ಎಂಟರವರೆಗೆ ಊರನ್ನು ಆವರಿಸಿಕೊಂಡಿದ್ದ ಚಳಿ ಮಾತ್ರ ಈಗ ಎರಡು ದಿನಗಳಿಂದ ಕಾಣೆಯಾಗಿದೆ. ಬೆಳಿಗ್ಗೆ ಆರರವರೆಗೆ ಮಾತ್ರ ಸ್ವಲ್ಪ ಇಬ್ಬನಿ ಕಾಣಿಸಿಕೊಂಡರೂ ನಂತರ ಪೂರ್ಣವಾಗಿ ಮಾಯವಾಗಿ ಹೋಗಿಬಿಡುತ್ತದೆ. ಚಳಿ ಕಡಮೆಯಾದರೆ , ಇಬ್ಬನಿ ಸುರಿಯುವುದು ಕಡಮೆಯಾದರೆ ಮುಂದಿನ ವರ್ಷ ಮಳೆ ಕಡಮೆ ಎಂಬ ನಂಬಿಕೆ ಇಲ್ಲಿಯವರದು. ಕಳೆದ ವರ್ಷ ಚಳಿಗಾಲವೇ ಇರಲಿಲ್ಲ. ಕೇವಲ ಐದು ದಿನ ಮಾತ್ರ ಚಳಿ ಕಾಡಿತ್ತು. ಜಾತ್ರೆಯ ಸಮಯ ಕಂಬಳಿಯ ರಾಶಿ ಹೊತ್ತು ಕೊಂಡು ಬಂದವರು ನಿರಾಶರಾಗಿ ಹಾಗೆಯೇ ಆ ರಾಶಿಯನ್ನು ಹೊತ್ತುಕೊಂಡು ಮರಳಿ ತಮ್ಮೂರಿಗೆ ಹೋಗಿದ್ದರು. ಈ ಬಾರಿಯೂ ಹೀಗೇ ಆಗಬಹುದು ಎಂಬ ನಿರೀಕ್ಷೆ ಎಲ್ಲರದೂ. 


ಜಾತ್ರೆ ಬರುತ್ತಿದೆ. ಎಳ್ಳಮಾವಸ್ಯೆಯ ಸ್ನಾನ ಮಾಡಲು ಎಲ್ಲಾ ಪಾಪಿಗಳೂ ಸಿದ್ಧರಾಗುತ್ತಿದ್ದಾರೆ. ಆ ದಿನ ರಾಮಕುಂಡದಲ್ಲಿ ಮುಳುಗಿದರೆ ಸರ್ವ ಪಾಪವೂ ಪರಿಹಾರವಾಗುತ್ತದೆ ಎಂಬ ವಿಶ್ವಾಸ ಊರಜನರಲ್ಲಿದೆ. ಹಾಗಾಗಿ ಬೆಳಿಗ್ಯೆ ಎಲ್ಲರೂ ಸರದಿಯಲ್ಲಿ ಒಂದು ಮುಳುಗು ಹಾಕಲು ನಿಂತಿರುತ್ತಾರೆ. ಒಂದೇ ಮುಳುಗು ಮಾತ್ರ. ಏಕೆಂದರೆ ಉಳಿದ ಪಾಪಿಗಳಿಗೂ ಅವಕಾಶ ಸಿಗಬೇಕಲ್ಲ. ಪೋಲಿಸ್ ಆ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ಇತ್ತ ಹರಿಯುವ ನದಿಯಲ್ಲಿ ನೀವು ಎಷ್ಟು ಹೊತ್ತು ಈಜಾಡಿದರೂ ಚಿಂತಿಲ್ಲ. ಆದರೆ ರಾಮಕುಂಡದಲ್ಲಿ ಆ ದಿನ ಒಂದೇ ಮುಳುಗು.  ವರ್ಷಕ್ಕೊಮ್ಮೆ ಬರುವ ಜಾತ್ರೆಗಾಗಿ ನಾನೂ ಕಾಯುತ್ತಿದ್ದೇನೆ -ಮನೆಯ ಚಿಕ್ಕ ಮಕ್ಕಳ ಜತೆಯಲ್ಲಿ ಸೇರಿ ಬೀದಿ ತುಂಬಾ ತಿರುಗಬೇಕು. ರಸ್ತೆ ಬದಿಯಲ್ಲಿ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುವವರು ಈಗಲೇ ತಮ್ಮ ತಮ್ಮ ವ್ಯಾಪಾರದ ಸ್ಥಳಗಳನ್ನು ಗುರುತಿಸಿಕೊಂಡು ಗಡಿ ನಿರ್ಧರಿಸಿ ತಮ್ಮ ಪತಾಕೆಯಂತೆ ಒಂದು ಹಗ್ಗವನ್ನು ಕಟ್ಟಿ ಹೋಗಿದ್ದಾರೆ. ಇನ್ನು ಸ್ವಲ್ಪ ದಿನಗಳಲ್ಲಿ ತಮ್ಮ ವಸ್ತುಗಳನ್ನು ತಂದು ಅಲ್ಲಿ ಹರಡಿ ಬಾಯಿಗೆ ಕೆಲಸಕೊಡುತ್ತಾರೆ. ಅವರ ಅಂಗಡಿಗೆ ವ್ಯಾಪಾರಕ್ಕೆ ಬರುವ ಹಳ್ಳಿಗರ ಚೌಕಾಶಿ ನೋಡಲು ಬಹಳ ಖುಷಿಯಾಗುತ್ತದೆ. ವ್ಯಾಪಾರಿ ಹೇಳಿದ ಬೆಲೆಯನ್ನು ಯಾರೂ ಕೊಡುವುದೇ ಇಲ್ಲ. ಹಾಗೆ ಕೊಟ್ಟರೆ ಅವನು ಮಂಗ . ಅವನು ಹೇಳಿದ್ದಕ್ಕಿಂತ ಕಡಮೆ ಕೊಟ್ಟರೆ ಮಾತ್ರ ಅವನು ಬುದ್ಧಿವಂತನೆನಿಸಿಕೊಳ್ಳುತ್ತಾನೆ. 


ಕಳೆದ ವರ್ಷ ಹೀಗಾಯಿತು. ನನ್ನ ಗೆಳೆಯರೊಬ್ಬರ ಅಂಗಡಿಯ ಎದುರು ಒಬ್ಬ ವ್ಯಾಪಾರಿ ದೊಡ್ಡದೊಡ್ಡ ಪೋಸ್ಟರ‍್ಗಳನ್ನು ಹರಡಿಕೊಂಡು ಕುಳಿತುಕೊಂಡಿದ್ದ. ಅವನ ವ್ಯಾಪಾರದ ರೀತಿಯನ್ನು ನೋಡುತ್ತಾ ನಾನೂ ಅಲ್ಲಿ ನನ್ನ ಗೆಳೆಯರ ಅಂಗಡಿಯಲ್ಲಿ ಕುಳಿತುಕೊಂಡಿದ್ದೆ. ಸಂಜೆಯ ವೇಳೆ ಕಾಲೇಜು ಹುಡುಗಿಯರ ದಂಡು ಒಂದು ಬಂದಿತು. ಆ ಪೋಸ್ಟರ‍್ಗಳನ್ನು ನೋಡುತ್ತಲೇ ಅಯ್ಯೋ ಹೃತಿಕ್, ಶಾರೂಕ್ ಎಂದು ಸಂಭ್ರಮಿಸಿತ್ತಿರುವಾಗಲೇ ರಾಮಚಂದ್ರಾಪುರ ಮಠದ ಇಬ್ಬರು ಮಾಣಿಗಳೂ ಅಲ್ಲಿಗೆ ಬಂದರು. ಆದರೆ ಅವರು ಅಪ್ಪಿ ತಪ್ಪಿಯೂ ಸಿನಿಮಾನಟರ ಪೋಸ್ಟರ‍್ಗಳನ್ನು ನೋಡಲೇ ಇಲ್ಲ. ಐಶ್ವರ್ಯಾ, ಕರೀನಾ ಪೋಸ್ಟರ್ ಅವರನ್ನು ಸೆಳೆಯಲೇ ಇಲ್ಲ. ಅಲ್ಲಿದ್ದ ದೇವರ ಪೋಸ್ಟರ‍್ಗಳ ಮೇಲೆಯೇ ಅವರ ಗಮನ. ಅದರಲ್ಲಿ ಎರಡು ಪೋಸ್ಟರ‍್ಗಳನ್ನು ಆರಿಸಿ ದುಡ್ಡುಕೊಟ್ಟು ಹೊರಟುಹೋದರು. ಒಂದು ಲೋಕಕ್ಕೆ ಪೂರ್ಣ ಕುರುಡರಾದ ಇವರ ವರ್ತನೆ ಕಂಡ ನನಗೆ ಅನಿಸಿದ್ದು- ಹೀಗೂ ಉಂಟೇ? ಇಂತಹ ಜಾತ್ರೆ ಜನವರಿ ೪ ರಂದು. ನಾನೂ ನನ್ನ ಮೊಮ್ಮಕ್ಕಳೂ ಕಾದು ಕುಳಿತಿದ್ದೇವೆ. 


ಕಳೆದವಾರ ಊರಿನ ನಟಮಿತ್ರರು ಕಾರ್ನಾಡರ ಯಯಾತಿಯನ್ನು ಪ್ರದರ್ಶಿಸಿದರು. ಸಾಗರದ ಎಸ್. ಮಾಲತಿಯ ನಿರ್ದೇಶನದಲ್ಲಿ ಮೂಡಿ ಬಂದ ನಾಟಕ ತೃಪ್ತಿಕರವಾಗಿತ್ತು. ಮುಖ್ಯಪಾತ್ರಗಳಲ್ಲಿ ಸಂದೇಶ್ ಜವಳಿ ಮತ್ತು ನಿಲೇಶ್ ಜವಳಿ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದರು ಎಂದೇ ಹೇಳಬೇಕು. ಇಬ್ಬರ ಅಭಿನಯ ಪ್ರೇಕ್ಷಕರ ಕರತಾಡನವನ್ನು ಗಳಿಸಿತು. ಆದರೆ ಸ್ತ್ರೀಪಾತ್ರಗಳು ಸೋತು ಹೋದವು. ಒಳ್ಳೆಯ ನಟಿಯರ ಅಭಾವದಿಂದಾಗಿ ನಿರ್ದೇಶಕರು ಕಾಲೇಜಿನ ಎಳೆಯ ವಿದ್ಯಾರ್ಥಿನಿಯರನ್ನು ಆರಿಸಿಕೊಂಡಿದ್ದರು. ಅವರ ಪಾತ್ರಕ್ಕೂ ಪ್ರಾಯಕ್ಕೂ ಹೊಂದಾಣಿಕೆಯಾಗದೇ ಹೋಯಿತು. 


ವಾರದ ಓದು: ಶ್ರೀ ಸದಾಶಿವ ಯೋಗಿಗಳ "ಸತ್ಯದ ಹುಡುಕಾಟ(೨೬೯ಪು) ಮತ್ತು ಸಂಗೀತ ಸಂವಾದ-ಭಾಸ್ಕರ್ ಚಂದಾವರ್ಕರ್ (೨೦೨ಪು).    

Friday, December 10, 2010

ಬಿಟ್ಟೆನೆಂದರೂ ಬಿಡದ ಈ ಮಾಯೆ

ಬಿಟ್ಟೆನೆಂದರೂ ಬಿಡದ ಈ ಮಾಯೆ 


ನಿನ್ನೆ ಶುಕ್ರವಾರ ಅನಿವಾರ್ಯವಾಗಿ ಮತ್ತೆ ಮಂಗಳೂರಿಗೆ ಹೋಗಬೇಕಾಯಿತು. ೨೦೦೬ರಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರು ಮಾಡಿ ಮಾರುತ್ತಿದ್ದ ಒಂದು ಗುಂಪನ್ನು ಮಂಗಳೂರು ಪೋಲಿಸರು ಬಂಧಿಸಿದ್ದರು. ಅದರಲ್ಲಿ ನಮ್ಮ ಕಾಲೇಜಿನ ಮುದ್ರೆಯಿರುವ ಒಂದು ಅಂಕಪಟ್ಟಿಯೂ ಇತ್ತು. ಅದರ ಮಹಜರಿಗಾಗಿ ಬಂದ ಪೋಲಿಸರಿಗೆ ಅದು ನಕಲಿ ಎಂದು ಹೇಳಿಕೆ ಕೊಟ್ಟಿದ್ದೆ. ನಾಲ್ಕು ವರುಷದ ನಂತರ ಈಗ ಈ ಕೇಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಅದರ ಸಾಕ್ಷಿ ಹೇಳಲು ನಾನು ನ್ಯಾಯಾಲಯಕ್ಕೆ ಹೋಗಬೇಕಾಗಿ ಬಂತು. ಬಹು ಕಾಲದ ನಂತರ ಮತ್ತೆ ಮಂಗಳೂರು ಭೇಟಿ ಹೀಗೆ ಆಯಿತು.


ಮಂಗಳೂರು ಪ್ರವೇಶಿಸುತ್ತಲೇ ಏನೋ ಒಂದು ತರದ ಅನುಭವ. ಮೂವತ್ತೇಳು ವರುಷಗಳ ಕಾಲ ಇದ್ದ ಈ ಊರನ್ನು ಬಿಟ್ಟು ಈಗ ಹುಟ್ಟೂರಿಗೆ ಹೋಗಿ ನೆಲೆನಿಂತರೂ, ಮತ್ತೆ ಮಂಗಳೂರು ನನ್ನ ಮೇಲೆ ಮೋಡಿ ಮಾಡಿತು. ಒಂದು ಕ್ಷಣ ನಾನು ಈ ಊರನ್ನು ಬಿಟ್ಟು ತಪ್ಪು ಮಾಡಿದೇನೋ ಎಂದೆನಿಸಿತು. ಅಗಾಧವಾಗಿ ದಿನದಿಂದ ದಿನಕ್ಕೆ ಗುರುತೇ ಸಿಗದಂತೆ ಬದಲಾಗುತ್ತಿರುವ ಮಂಗಳೂರಿನ ಮಾಯೆಯೇ ಅಂತಹದು. ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳ ಮೌಲ್ಯಮಾಪನ ಈಗ ನಡೆಯುತ್ತಿದೆ. ಈ ಕಾರಣದಿಂದ ನನ್ನ ಕನ್ನಡ ಅಧ್ಯಾಪಕರನ್ನು ಹುಡುಕಿ ಎಸ್‍ಡಿಎಂ ಕಾಲೇಜಿಗೆ ಹೋಗಿ ಮೂರು ಮಾಳಿಗೆಯನ್ನು ಏರಿ ಏದುಸಿರು ಬಿಡುತ್ತಾ ನನ್ನವರನ್ನು ನೋಡುತ್ತಾ ನಿಂತಾಗ  ಹತ್ತಿ ಬಂದ ಆಯಾಸವೆಲ್ಲಾ ಕ್ಷಣಮಾತ್ರದಲ್ಲಿ ಪರಿಹಾರವಾಗಿತ್ತು. ಎಲ್ಲರೂ ನನ್ನವರೇ. ಬಾಯಿತುಂಬಾ ಮಾತನಾಡಿಸುವವರು. ಅವರನ್ನೆಲ್ಲಾ ನೋಡಿ ಮಾತನಾಡಿಸಿದಾಗ ನನ್ನ ಊರಿನ ಒಂಟಿತನ ನೆನಪಿಗೆ ಬಂದಿತು. ಇಲ್ಲಿಯೇ ಇದ್ದಿದ್ದರೆ ಇವರೆನ್ನೆಲ್ಲಾ ಆಗಾಗ ನೋಡುತ್ತಾ ಇರಬಹುದಿತ್ತಲ್ಲ ಎಂದೆನಿಸಿತು. 


ಮಂಗಳೂರಿನ ಮತ್ತೊಂದು ಆಕರ್ಷಣೆಯೆಂದರೆ ನಮ್ಮ ಅಶೋಕರ ಅತ್ರಿ ಪುಸ್ತಕ ಮಳಿಗೆ. ಮಂಗಳೂರಿಗೆ ಹೋದಾಗಲೆಲ್ಲಾ ಅಲ್ಲಿಗೆ ಹೋಗದಿದ್ದರೆ ನನ್ನ ಮಂಗಳೂರು ದರ್ಶನ ಅಪೂರ್ಣವಾಗಿರುತ್ತದೆ. ವ್ರತದಂತೆ ಅಲ್ಲಿಗೆ ಹೋಗಿಯೇ ಹೋಗುತ್ತಿರುತ್ತೇನೆ. ಅವರ ಮಳಿಗೆಯಲ್ಲಿರುವ ಪುಸ್ತಕಗಳ ರಾಶಿ ನೋಡಿದಾಗ ಮಾಲಿಗೆ ಹೋಗಿ ಕಕ್ಕಾಬಿಕ್ಕಿಯಾಗುವ ಮಗುವಿನಂತೆ ನನ್ನ ಮನಸ್ಸು ಗೊಂದಲಕ್ಕೀಡಾಗುತ್ತದೆ. ಯಾವ ಪುಸ್ತಕ ಆರಿಸುವುದು ಎಂಬ ಸಮಸ್ಯೆ ಕಾಡುತ್ತದೆ. ಎಲ್ಲವೂ ಬೇಕೆನಿಸುತ್ತದೆ.  ನಿನ್ನೆಯೂ ಅಲ್ಲಿಗೆ ಹೋಗಿ ಹೊಸಪುಸ್ತಕಗಳನ್ನು ಕೊಂಡು ಬಂದೆ. ಮತ್ತೆ ಒಂದು ತಿಂಗಳು ಚಿಂತೆಯಿಲ್ಲ ಎಂಬ ಸಮಾಧಾನ ಈಗ. 


 ಮಂಗಳೂರಿಗೆ ಬಂದಾಕ್ಷಣ  ಮನಸ್ಸಿನಲ್ಲಿ ಆವರಿಸಿಕೊಂಡ ಮಾಯೆ  ಊರಿನತ್ತ ಹೊರಟಾಗ  ನಿಧಾನವಾಗಿ ಕರಗಲಾರಂಭಿಸಿತು. ಮತ್ತೆ ನನ್ನೂರೇ ಒಳ್ಳೆಯದು. ಏನಿದ್ದರೂ ಇದೇ ಸ್ವರ್ಗವೆಂದೆನಿಸಿತು. ಅಲ್ಲಿಗೆ ಬಂದಾಗಲೆಲ್ಲಾ ವಿಶ್ವಾಮಿತ್ರನ ಮುಂದೆ ಕುಣಿದ ಮೇನಕೆಯಂತೆ ಈ ಮಾಯೆ ನನ್ನನ್ನು ಆವರಿಸಿಕೊಳ್ಳುತ್ತಿರುತ್ತದೆ. ಅದರಿಂದ ಪಾರಾಗಿ ಬಂದ ನಂತರ ನನ್ನೂರು ಹೊಸತಾದ ಬಣ್ಣದಿಂದ ಕಂಗೊಳಿಸುತ್ತಿರುತ್ತದೆ..  


ಈಗ ನಿನ್ನೆಯ ನೆನಪುಗಳು ಉಳಿದುಕೊಂಡಿವೆ. ಕೈಯಲ್ಲಿ ನಿನ್ನೆ ಕೊಂಡು ತಂದ ಹೊಸ ಪುಸ್ತಕಗಳಿವೆ. ಮನಸ್ಸು ತಳಮಳವನ್ನು ಮೆಟ್ಟಿನಿಂತಿದೆ. ಏನೋ ಲವಲವಿಕೆ ಮೂಡಿದೆ. ಈ ದಿನ ಆಗಸದಲ್ಲಿ ಮೋಡ ಆವರಿಸಿಕೊಂಡು ಹಗಲಿನಲ್ಲಿ ಮಬ್ಬುಗತ್ತಲೆ ತುಂಬಿಕೊಂಡರೂ ಖುಷಿಯಲ್ಲಿದ್ದೇನೆ.


ವಾರದ ಓದು.
ಗಾನಗಂಗೆಯಾದ ಗಂಗೂಬಾಯಿ ಹಾನಗಲ್‍ರವರ ಕುರಿತಾದ ಎರಡು ಪುಸ್ತಕಗಳನ್ನು ಓದಿದೆ. ೧, ನನ್ನ ಬದುಕಿನ ಹಾಡು-ಎನ್ಕೆ (೧೦೬) ಮತ್ತು ೨. ಗಂಗಾವತರಣ- ದಮಯಂತಿ ನರೇಗಲ್ಲ. (೧೫೫). ಎರಡೂ ಪುಸ್ತಕಗಳನ್ನು ಸಂಗೀತ ಪ್ರೇಮಿಯಾದ ನನ್ನ ಆತ್ಮೀಯರಾದ ಶ್ರೀ ಮಹಾಲಿಂಗಭಟ್ಟರಿಗೆ ದಾನ ಮಾಡಿದೆ. ಸತ್ಪಾತ್ರರಿಗೆ ಕೊಟ್ಟ ಸಮಾಧಾನ ನನಗೆ. 

Saturday, December 4, 2010

ಒಮ್ಮೆ ಹಾಡಿದ ಹಾಡು ಮತ್ತೊಮ್ಮೆ

ಒಮ್ಮೆ ಹಾಡಿದ ಹಾಡನ್ನು ಮತ್ತೊಮ್ಮೆ ಹಾಡದಿರಲು ನಿರ್ಧರಿಸಿದ್ದೇನೆ. ಅಂದರೆ ನಾನು ಒಬ್ಬ ಗಾಯಕನೆಂಬ ಭ್ರಮೆ ಬೇಡ. ಈ ವಾರದ ನನ್ನ ಬರವಣಿಗೆಯ ಶೀರ್ಷಿಕೆ ಇದು ಅಷ್ಟೇ. ನನ್ನ ಬಳಿಯಲ್ಲಿ ಸುಮಾರು ಮೂರು ಸಾವಿರಕ್ಕೂ ಮಿಕ್ಕ ಪುಸ್ತಕಗಳಿವೆ.  ವೃತ್ತಿಗೆ ಸೇರಿದ ದಿನದಿಂದ ಪುಸ್ತಕ ಸಂಗ್ರಹಿಸಲು ಪ್ರಾರಂಬಿಸಿದೆ. ನನ್ನ ಗುರುಗಳಾದ ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು ತರಗತಿಯಲ್ಲಿ ’ ಓದಬೇಕ್ರಯ್ಯಾ. ಪ್ರಪಂಚದಲ್ಲಿ ಪ್ರತಿ ಸೆಕೆಂಡಿಗೆ ಇಷ್ಟು ಪುಸ್ತಕಗಳು ಅಚ್ಚಾಗುತ್ತಿವೆ. ಅಂದರೆ ನಿಮಿಷಕ್ಕೆ ಇಷ್ಟಾಯಿತು. ಗಂಟೆಗೆ ಇಷ್ಟಾಯಿತು. ನೀವು ಇದರಲ್ಲಿ ಎಷ್ಟು ಓದಲು ಸಾಧ್ಯ? ಆದ್ದರಿಂದ ಓದಿ . ಓದಿ ಎಂದು ಪ್ರೊತ್ಸಾಹಿಸುತ್ತಿದ್ದರು. ಯಾವುದೇ ಪಠ್ಯವನ್ನು ಮಾಡುವಾಗ ನಾನು ಅದರ ಮೂಲವನ್ನು ಓದುವ ಅಭ್ಯಾಸ ಇಟ್ಟುಕೊಂಡಿದ್ದೆ. ಅದರ ಕುರಿತಾಗಿ ಬಂದಿರಬಹುದಾದ ಎಲ್ಲಾ ಲೇಖನಗಳನ್ನು ಸಂಗ್ರಹಿಸಿ ಓದುತ್ತಿದ್ದೆ. ಅಲ್ಲಿಂದ ಪ್ರಾರಂಭವಾದ ನನ್ನ ಹವ್ಯಾಸ ಇವತ್ತಿಗೂ ಹೋಗಿಲ್ಲ. ಇಲ್ಲಿ ಸಣ್ಣದಾದ ಊರಲ್ಲಿ ಕುಳಿತುಕೊಂಡರೂ ತಿಂಗಳಿಗೆ ಏಳೆಂಟುಪುಸ್ತಕಗಳನ್ನು ತರಿಸಿಕೊಳ್ಳುತ್ತಿರುತ್ತೇನೆ. ಒಂದು ಊರಿನ ಮಾನಸಿಕ ಸ್ಥಿತಿಯಲ್ಲಿ ಅಳೆಯಬೇಕಾದರೆ ಅಲ್ಲಿನ ಪುಸ್ತಕದ ಅಂಗಡಿಗೆ ಹೋಗಬೇಕು. ಎಷ್ಟೆಷ್ಟು ಪುಸ್ತಕದ ಅಂಗಡಿಗಳು ಇರುತ್ತವೆಯೋ ಅಷ್ಟು ಆರೋಗ್ಯವಂತವಾಗಿ ಆ ಊರು ಸಮಾಜ ಇದೆ ಎನ್ನುವುದು ತಿಳಿಯುತ್ತದೆ. ವ್ಯಾಪಾರವಿಲ್ಲದೆ ಆ ಅಂಗಡಿಗಳು ಸೊರಗುತ್ತಿವೆ ಎಂದಾದರೆ ಊರಿಗೆ ಗ್ರಹಣ ಹಿಡಿಯುತ್ತಿದೆ ಎಂದೇ ಅರ್ಥ ಮಾಡಿಕೊಳ್ಳಬೇಕು.  ಗ್ರಹಚಾರಕ್ಕೆ ನನ್ನೂರಿನಲ್ಲಿ ಒಳ್ಳೆಯ ಪುಸ್ತಕ ಭಂಡಾರವಿಲ್ಲ. ಹಾಗಾಗಿ ಮಂಗಳೂರಿನ ಅತ್ರಿಯಿಂದ ತಿಂಗಳಿಗೊಮ್ಮೆ ಪುಸ್ತಕ ತರಿಸಿಕೊಳ್ಳುತ್ತಿರುತ್ತೇನೆ.


ಮೂರು ತಿಂಗಳ ಹಿಂದೆ ಹೀಗಾಯಿತು. ಭೈರಪ್ಪನವರ ಕವಲು ಪ್ರಕಟವಾದಾಕ್ಷಣ ತರಿಸಿಕೊಂಡು ಓದಿದೆ. ಅದನ್ನು ಓದಿದನಂತರ ಅವರ ಹಿಂದಿನ ಕಾದಂಬರಿಗಳನ್ನು ಓದುವ ಹುಕ್ಕಿ ಬಂದಿತು. ಸರಿ . ಮತ್ತೆ ಅವರ ಹಳೆಯ ಕಾದಂಬರಿಗಳನ್ನು ಒಂದರ ನಂತರ ಒಂದರಂತೆ ಓದಲು ಪ್ರಾರಂಭಿಸಿದೆ. ಹೀಗೆ ನಾಲ್ಕು ಪುಸ್ತಕ ಓದಿದೆ. ಆಗ ನನ್ನ ಹೊಸ ಓದಿಗೆ ಅಡ್ಡಿಯಾಯಿತು. ಮತ್ತೆ ಮತ್ತೆ ಅವೇ ಎಂದೋ ಓದಿದ ಪುಸ್ತಕಗಳನ್ನು ಓದುತ್ತಿದ್ದೇನೆ. ಇದು ಸರಿಯಲ್ಲವೆಂದೆನಿಸಿತು. ಹಾಗಾಗಿ ಈಗ ಮತ್ತೆ ಹಳೆಯ ಪುಸ್ತಕಗಳನ್ನು ಓದುವುದನ್ನು ಬಿಟ್ಟಿದ್ದೇನೆ. ಒಮ್ಮೆ ಓದಿದ ಪುಸ್ತಕವನ್ನು ಇನ್ನು ಯಾವುದೇ ಕಾರಣಕ್ಕೆ ಮತ್ತೊಮ್ಮೆ ಓದಲಾರೆ ಎಂದು ನಿರ್ಧರಿಸಿದ್ದೇನೆ. ಓದಿಯಾದ ಪುಸ್ತಕಗಳನ್ನು ನಿರ್ಮೋಹದಿಂದ ಕೈಯೆತ್ತಿ ದಾನ ಮಾಡುತ್ತಿದ್ದೇನೆ.  ಇದು ನನ್ನ ಅಂತಿಮ ಓದು. ಹಾಗಾಗಿ ಪುನರಾವರ್ತನೆಯಾಗದಂತೆ ಒಮ್ಮೆ ಓದಿ ಮುಗಿಸಬೇಕು. ಒಮ್ಮೆ ಹಾಡಿದ ಹಾಡು ಮತ್ತೆ ಹಾಡಬಾರದು.  


ಈ ವಾರದ ಓದು. : ರವಿಬೆಳೆಗೆರೆಯವರ ಕಾಮರಾಜಮಾರ್ಗ (೪೦೨ಪು) ಮತ್ತು ರಥಬೀದಿ- ಶ್ರೀಧರ ಬಳೆಗಾರ (೧೫೩ಪು).