ತಕಿಟ ತಕಿಟ ಧೋಂ

Friday, December 10, 2010

ಬಿಟ್ಟೆನೆಂದರೂ ಬಿಡದ ಈ ಮಾಯೆ

ಬಿಟ್ಟೆನೆಂದರೂ ಬಿಡದ ಈ ಮಾಯೆ 


ನಿನ್ನೆ ಶುಕ್ರವಾರ ಅನಿವಾರ್ಯವಾಗಿ ಮತ್ತೆ ಮಂಗಳೂರಿಗೆ ಹೋಗಬೇಕಾಯಿತು. ೨೦೦೬ರಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರು ಮಾಡಿ ಮಾರುತ್ತಿದ್ದ ಒಂದು ಗುಂಪನ್ನು ಮಂಗಳೂರು ಪೋಲಿಸರು ಬಂಧಿಸಿದ್ದರು. ಅದರಲ್ಲಿ ನಮ್ಮ ಕಾಲೇಜಿನ ಮುದ್ರೆಯಿರುವ ಒಂದು ಅಂಕಪಟ್ಟಿಯೂ ಇತ್ತು. ಅದರ ಮಹಜರಿಗಾಗಿ ಬಂದ ಪೋಲಿಸರಿಗೆ ಅದು ನಕಲಿ ಎಂದು ಹೇಳಿಕೆ ಕೊಟ್ಟಿದ್ದೆ. ನಾಲ್ಕು ವರುಷದ ನಂತರ ಈಗ ಈ ಕೇಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಅದರ ಸಾಕ್ಷಿ ಹೇಳಲು ನಾನು ನ್ಯಾಯಾಲಯಕ್ಕೆ ಹೋಗಬೇಕಾಗಿ ಬಂತು. ಬಹು ಕಾಲದ ನಂತರ ಮತ್ತೆ ಮಂಗಳೂರು ಭೇಟಿ ಹೀಗೆ ಆಯಿತು.


ಮಂಗಳೂರು ಪ್ರವೇಶಿಸುತ್ತಲೇ ಏನೋ ಒಂದು ತರದ ಅನುಭವ. ಮೂವತ್ತೇಳು ವರುಷಗಳ ಕಾಲ ಇದ್ದ ಈ ಊರನ್ನು ಬಿಟ್ಟು ಈಗ ಹುಟ್ಟೂರಿಗೆ ಹೋಗಿ ನೆಲೆನಿಂತರೂ, ಮತ್ತೆ ಮಂಗಳೂರು ನನ್ನ ಮೇಲೆ ಮೋಡಿ ಮಾಡಿತು. ಒಂದು ಕ್ಷಣ ನಾನು ಈ ಊರನ್ನು ಬಿಟ್ಟು ತಪ್ಪು ಮಾಡಿದೇನೋ ಎಂದೆನಿಸಿತು. ಅಗಾಧವಾಗಿ ದಿನದಿಂದ ದಿನಕ್ಕೆ ಗುರುತೇ ಸಿಗದಂತೆ ಬದಲಾಗುತ್ತಿರುವ ಮಂಗಳೂರಿನ ಮಾಯೆಯೇ ಅಂತಹದು. ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳ ಮೌಲ್ಯಮಾಪನ ಈಗ ನಡೆಯುತ್ತಿದೆ. ಈ ಕಾರಣದಿಂದ ನನ್ನ ಕನ್ನಡ ಅಧ್ಯಾಪಕರನ್ನು ಹುಡುಕಿ ಎಸ್‍ಡಿಎಂ ಕಾಲೇಜಿಗೆ ಹೋಗಿ ಮೂರು ಮಾಳಿಗೆಯನ್ನು ಏರಿ ಏದುಸಿರು ಬಿಡುತ್ತಾ ನನ್ನವರನ್ನು ನೋಡುತ್ತಾ ನಿಂತಾಗ  ಹತ್ತಿ ಬಂದ ಆಯಾಸವೆಲ್ಲಾ ಕ್ಷಣಮಾತ್ರದಲ್ಲಿ ಪರಿಹಾರವಾಗಿತ್ತು. ಎಲ್ಲರೂ ನನ್ನವರೇ. ಬಾಯಿತುಂಬಾ ಮಾತನಾಡಿಸುವವರು. ಅವರನ್ನೆಲ್ಲಾ ನೋಡಿ ಮಾತನಾಡಿಸಿದಾಗ ನನ್ನ ಊರಿನ ಒಂಟಿತನ ನೆನಪಿಗೆ ಬಂದಿತು. ಇಲ್ಲಿಯೇ ಇದ್ದಿದ್ದರೆ ಇವರೆನ್ನೆಲ್ಲಾ ಆಗಾಗ ನೋಡುತ್ತಾ ಇರಬಹುದಿತ್ತಲ್ಲ ಎಂದೆನಿಸಿತು. 


ಮಂಗಳೂರಿನ ಮತ್ತೊಂದು ಆಕರ್ಷಣೆಯೆಂದರೆ ನಮ್ಮ ಅಶೋಕರ ಅತ್ರಿ ಪುಸ್ತಕ ಮಳಿಗೆ. ಮಂಗಳೂರಿಗೆ ಹೋದಾಗಲೆಲ್ಲಾ ಅಲ್ಲಿಗೆ ಹೋಗದಿದ್ದರೆ ನನ್ನ ಮಂಗಳೂರು ದರ್ಶನ ಅಪೂರ್ಣವಾಗಿರುತ್ತದೆ. ವ್ರತದಂತೆ ಅಲ್ಲಿಗೆ ಹೋಗಿಯೇ ಹೋಗುತ್ತಿರುತ್ತೇನೆ. ಅವರ ಮಳಿಗೆಯಲ್ಲಿರುವ ಪುಸ್ತಕಗಳ ರಾಶಿ ನೋಡಿದಾಗ ಮಾಲಿಗೆ ಹೋಗಿ ಕಕ್ಕಾಬಿಕ್ಕಿಯಾಗುವ ಮಗುವಿನಂತೆ ನನ್ನ ಮನಸ್ಸು ಗೊಂದಲಕ್ಕೀಡಾಗುತ್ತದೆ. ಯಾವ ಪುಸ್ತಕ ಆರಿಸುವುದು ಎಂಬ ಸಮಸ್ಯೆ ಕಾಡುತ್ತದೆ. ಎಲ್ಲವೂ ಬೇಕೆನಿಸುತ್ತದೆ.  ನಿನ್ನೆಯೂ ಅಲ್ಲಿಗೆ ಹೋಗಿ ಹೊಸಪುಸ್ತಕಗಳನ್ನು ಕೊಂಡು ಬಂದೆ. ಮತ್ತೆ ಒಂದು ತಿಂಗಳು ಚಿಂತೆಯಿಲ್ಲ ಎಂಬ ಸಮಾಧಾನ ಈಗ. 


 ಮಂಗಳೂರಿಗೆ ಬಂದಾಕ್ಷಣ  ಮನಸ್ಸಿನಲ್ಲಿ ಆವರಿಸಿಕೊಂಡ ಮಾಯೆ  ಊರಿನತ್ತ ಹೊರಟಾಗ  ನಿಧಾನವಾಗಿ ಕರಗಲಾರಂಭಿಸಿತು. ಮತ್ತೆ ನನ್ನೂರೇ ಒಳ್ಳೆಯದು. ಏನಿದ್ದರೂ ಇದೇ ಸ್ವರ್ಗವೆಂದೆನಿಸಿತು. ಅಲ್ಲಿಗೆ ಬಂದಾಗಲೆಲ್ಲಾ ವಿಶ್ವಾಮಿತ್ರನ ಮುಂದೆ ಕುಣಿದ ಮೇನಕೆಯಂತೆ ಈ ಮಾಯೆ ನನ್ನನ್ನು ಆವರಿಸಿಕೊಳ್ಳುತ್ತಿರುತ್ತದೆ. ಅದರಿಂದ ಪಾರಾಗಿ ಬಂದ ನಂತರ ನನ್ನೂರು ಹೊಸತಾದ ಬಣ್ಣದಿಂದ ಕಂಗೊಳಿಸುತ್ತಿರುತ್ತದೆ..  


ಈಗ ನಿನ್ನೆಯ ನೆನಪುಗಳು ಉಳಿದುಕೊಂಡಿವೆ. ಕೈಯಲ್ಲಿ ನಿನ್ನೆ ಕೊಂಡು ತಂದ ಹೊಸ ಪುಸ್ತಕಗಳಿವೆ. ಮನಸ್ಸು ತಳಮಳವನ್ನು ಮೆಟ್ಟಿನಿಂತಿದೆ. ಏನೋ ಲವಲವಿಕೆ ಮೂಡಿದೆ. ಈ ದಿನ ಆಗಸದಲ್ಲಿ ಮೋಡ ಆವರಿಸಿಕೊಂಡು ಹಗಲಿನಲ್ಲಿ ಮಬ್ಬುಗತ್ತಲೆ ತುಂಬಿಕೊಂಡರೂ ಖುಷಿಯಲ್ಲಿದ್ದೇನೆ.


ವಾರದ ಓದು.
ಗಾನಗಂಗೆಯಾದ ಗಂಗೂಬಾಯಿ ಹಾನಗಲ್‍ರವರ ಕುರಿತಾದ ಎರಡು ಪುಸ್ತಕಗಳನ್ನು ಓದಿದೆ. ೧, ನನ್ನ ಬದುಕಿನ ಹಾಡು-ಎನ್ಕೆ (೧೦೬) ಮತ್ತು ೨. ಗಂಗಾವತರಣ- ದಮಯಂತಿ ನರೇಗಲ್ಲ. (೧೫೫). ಎರಡೂ ಪುಸ್ತಕಗಳನ್ನು ಸಂಗೀತ ಪ್ರೇಮಿಯಾದ ನನ್ನ ಆತ್ಮೀಯರಾದ ಶ್ರೀ ಮಹಾಲಿಂಗಭಟ್ಟರಿಗೆ ದಾನ ಮಾಡಿದೆ. ಸತ್ಪಾತ್ರರಿಗೆ ಕೊಟ್ಟ ಸಮಾಧಾನ ನನಗೆ. 

1 comment:

  1. ಸ್ವಾಮೀ ನಿಮ್ಮದು ವಿಶ್ವಮೈತ್ರಿ ಸರಿ. ಆದರೆ ಮೇನಕೆ ಬಂದರೆ ಶಕುಂತಲೆ ಆಗಬೇಕಲ್ಲಾ! ಏನು ವ್ಯವಸ್ಥೆ?
    ಅಶೋಕವರ್ಧನ

    ReplyDelete