ತಕಿಟ ತಕಿಟ ಧೋಂ

Thursday, December 30, 2010

ತಕಿಟ ತಕಿಟ ಧೋಂ 


ಕಳೆದ ವಾರ ಹೀಗೆ ಸುಮ್ಮನೇ ಕರಗಿಹೋಗಿಲ್ಲವೆನ್ನುವುದೇ ಒಂದು ಸಮಾಧಾನ. ಇಲ್ಲಿ ನನ್ನೂರಿನಲ್ಲಿ ಅಂತಹ ಹೇಳಿಕೊಳ್ಳುವ ಕಾರ್ಯಕ್ರಮಗಳು ನಡೆಯುವುದೇ ವಿರಳ. ಚಾತಕ ಪಕ್ಷಿಯಂತೆ ಎಲ್ಲಿಯಾದರೂ ಯಾವುದಾದರೂ ಒಳ್ಳೆಯ ಕಾರ್ಯಕ್ರಮಗಳು ನಡೆಯಬಹುದೇ ಎಂದು ಕಣ್ಣು ಕಿವಿಗಳು ಹಪಹಪಿಸುತ್ತಿರುತ್ತವೆ. ಏನೂ ಇಲ್ಲದೆಯೂ ಬದುಕಬಹುದು ಎನ್ನುವುದು ಸತ್ಯ. ಆದರೂ ಮನಸ್ಸಿಗೆ ಕೆಲವೊಮ್ಮೆ ಬೇಸರ ಕವಿದುಕೊಂಡಾಗ , ಈ ಮಬ್ಬನ್ನು ಕಳೆಯುವ ಯಾವುದಾದರೂ ಒಂದು ಏನಾದರೂ  ಒಂದರ ಅಗತ್ಯವಿರುತ್ತದೆ. ಈ ವಾರ ಅಂತಹದೊಂದು ಅವಕಾಶ ಒದಗಿ ಬಂದಿತು. 


ಓಡಿಹೋದ ಚಳಿ ಮತ್ತೆ ಕಾಣಿಸಿಕೊಳ್ಳುತ್ತಿದೆ. ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡಂತೆ ಅಲ್ಲ  .ಮೈಯನ್ನು ಗಡಗಡ ನಡುಗಿಸುವ ಚಳಿ ಕಾಣಿಸಿಕೊಂಡಿಲ್ಲ. ಆದರೆ ಇದೆ. ಸಂಜೆಯಾಗುತ್ತಲೇ ದೇಹವಿಡೀ ತಂಪಾಗುವ ಹಾಗೆ., ಮನೆಯ ನೆಲವೆಲ್ಲಾ ತಣ್ಣಗಾಗುವ ಹಾಗೆ, ಚಳಿ ಕಾಣಿಸಿಕೊಂಡಿದೆ. ಕಂಬಳಿ ಹೊದ್ದು ಮಲಗುವ ಅಭ್ಯಾಸವೇ ಇಲ್ಲದ ನಾನು ಈಗ ಅದನ್ನು ದಿನನಿತ್ಯ ಹೊದ್ದು ಮಲಗಬೇಕಾಗಿದೆ. ಇಬ್ಬನಿ ಮಾತ್ರ ಕಾಣಿಸುತ್ತಿಲ್ಲ. ಇಬ್ಬನಿ ಇಲ್ಲದಿದ್ದರೆ ಮುಂದಿನ ವರುಷ ಮಳೆ ಕಡಮೆಯಾಗುವುದಂತೆ. 


ಮೊನ್ನೆ ಬುಧವಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಒಂದು ಅಪೂರ್ವವಾದ ಕಾರ್ಯಕ್ರಮ ನಡೆಯಿತು. ಇಲ್ಲಿನ ಏಕತಾನತೆಗೆ ಬೇಸತ್ತು ಗೆಳೆಯರೊಡನೆ ಕಾರಿನಲ್ಲಿ ಅಲ್ಲಿಗೆ ಹೊರಟೆವು. ಸುಮಾರು ಇಪ್ಪತ್ತೆರೆಡು ತಬಲಾ ವಾದಕರು ಒಂದೇ ವೇದಿಕೆಯಲ್ಲಿ ತಮ್ಮ ಕಲಾ ಪ್ರದರ್ಶನವನ್ನು ನೀಡುವ ಕಾರ್ಯಕ್ರಮ "ತಬಲಾ ಫೀಲಿಯಾ". ಸದ್ಯಕ್ಕೆ ಅಮೆರಿಕಾದಲ್ಲಿರುವ ಸಮೀರ್ ಚಟರ್ಜಿ ತಮ್ಮ ಎಲ್ಲಾ ಶಿಷ್ಯರನ್ನು ಕರೆದುಕೊಂಡು ಬಂದು ಈ ಕಾರ್ಯಕ್ರಮ ನೀಡಿದ್ದರು. ಇವರಲ್ಲಿ ಎಂಟು ಜನ ವಿದೇಶಿಯರು, ಎಂಟು ಜನ ಪಶ್ಚಿಮ ಬಂಗಾಳದವರು ಮತ್ತು ಉಳಿದ ಆರು ಜನ ನಮ್ಮ ಕನ್ನಡಿಗರು. ಮೂರು ಸಾಲಿನಲ್ಲಿ ಕುಳಿತು ವಿಶಿಷ್ಟವಾದ ಸಂಗೀತ ಸಂಯೋಜನೆಯಿಂದ ಅದ್ಭುತವಾದ ಕಾರ್ಯಕ್ರಮ ನೀಡಿದರು. ಪ್ರಾರಂಭದಲ್ಲಿ ಶ್ರೀ ಅಶೋಕ ಹುಗ್ಗಣ್ಣವರ‍್ರವರ ಮತ್ತು ಶ್ರೀಮತಿ ಪಿಯು ಚಟರ್ಜಿಯವರ ಸಂಗೀತ ಕಾರ್ಯಕ್ರಮವಿತ್ತು. ನಂತರ ಒಂದು ಗಂಟೆಯ ಕಾಲ ತಬಲಾ ವಾದನ. ಮನುಷ್ಯನ ಬದುಕಿನ ನಾಲ್ಕು ಅವಸ್ಥೆಗಳಾದ -ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸವೆಂಬ ಈ ನಾಲ್ಕು ಅವಸ್ಥೆಗಳನ್ನು ಸಂಗೀತದಲ್ಲಿ ಅಳವಡಿಸಿಕೊಂಡು ವಿಭಿನ್ನ ಸ್ವರಗಳಿಂದ ಅದನ್ನು ಮನದಟ್ಟಾಗುವಂತೆ ಕಾರ್ಯಕ್ರಮವನ್ನು ರೂಪಿಸಿದ್ದರು. ಆಶ್ಚರ್ಯವೆಂದರೆ ಪ್ರತಿಯೊಬ್ಬರ ಬಳಿಯಿದ್ದ ಒಂದೊಂದು ತಬಲಾವೂ ಒಂದೊಂದು ರೀತಿಯ ನಾದವನ್ನು ಹೊರಡಿಸುತ್ತಿತ್ತು. ಹಿನ್ನಲೆಯಲ್ಲಿ ಇಬ್ಬರು ಗಾಯಕಿಯರು ಮತ್ತು ಇಬ್ಬರು ಗಾಯಕರು ಸಹಕರಿಸಿದ್ದರು. ಉಪನಿಷತ್ತಿನ ಕೆಲವು ಶ್ಲೋಕಗಳನ್ನು  ಮತ್ತು ಆಲಾಪನೆಯನ್ನು  ಹಿತವಾಗಿ ಹಾಡುತ್ತಿದ್ದರು.   ಅಲ್ಲಿ ಕಳೆದ ಮೂರುಗಂಟೆ ವ್ಯರ್ಥವಾಗಲಿಲ್ಲವೆಂದೆನಿಸಿತು.  


ಮುಂದಿನ ವಾರ ನಮ್ಮ ಕುಪ್ಪಳ್ಳಿಗೆ ಹೋಗಬೇಕು.  ಕುವೆಂಪು ಹಬ್ಬವಿದೆ. (ಡಿ.೨೯ ಮತ್ತು ೩೦)


ಕಳೆದವಾರದ ಓದು. :೧. ಸಂಗೀತ ಜೀವನ ತಪಸ್ಯಾ: ದ.ಸ.ಗರುಡ .(೨೭೭ಪು). ೨. ಸಂಗೀತ ಸಮಯ : ಎಸ್.ಕೃಷ್ಣಮೂರ್ತಿ. (೩೪೯ಪು) . ೩. ಸಂಗೀತ ಸಾಮ್ರಾಜ್ಞಿ ಎಂ.ಎಸ್-ಸಾಕೃರಾಮಚಂದ್ರರಾವ್ (೧೦೬) ೪, ನಾ ಕಂಡ ಕಲಾವಿದರು-ವಾಸುದೇವಾಚಾರ್ಯ (೧೩೫ಪು) ೫, ನನ್ನ ರಸಯಾತ್ರೆ- ಮಲ್ಲಿಕಾರ್ಜುನ್ ಮನ್ಸೂರ್ (೧೧೨ಪು)

No comments:

Post a Comment