ತಕಿಟ ತಕಿಟ ಧೋಂ

Wednesday, November 17, 2010

ಮತ್ತದೇ ಬೇಸರ, ಅದೇ ಮೋಡ, ಅದೇ ಮಳೆ.

ಮತ್ತದೇ ಬೇಸರ, ಅದೇ ಮೋಡ, ಅದೇ ಮಳೆ.


ಪ್ರಾಯವಾಗುತ್ತಾ ಹೋದಂತೆ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾ "ಹಿಂದೆಲ್ಲಾ ಹೀಗಿರಲಿಲ್ಲ" ಎಂದು ಹಪಹಪಿಸುವುದು ಸಾಮಾನ್ಯ.  ಈಗಿನ ವಾತಾವರಣ ನೋಡಿ. ಮಳೆಗಾಲ ಸಾಧಾರಣವಾಗಿ ಅಕ್ಟೋಬರ್ ತಿಂಗಳಿಗೆ ಮುಗಿದು ಹೋಗುತ್ತಿತ್ತು. ನವೆಂಬರ್ ಡಿಸೆಂಬರ್ ತಿಂಗಳೆಂದರೆ ಥರಥರ ನಡುಗಿಸುವ ಚಳಿ ಕಾಣಿಸಿಕೊಳ್ಳಬೇಕಾಗಿತ್ತು. ಈಗ ಏನಾಗಿದೆ ಎಂದರೆ ಇನ್ನೂ ಮಳೆಗಾಲ ಮುಗಿದಿಲ್ಲ. ಪ್ರತಿದಿನವೂ ಮಳೆ ಮಳೆ. ಮನಸ್ಸನ್ನು ಮುದುಡಿಸುವ ಮಳೆ. ಬೇಸರವನ್ನು ಹೆಚ್ಚಿಸುವ ಮಳೆ. ಉತ್ಸಾಹವನ್ನು ಕುಗ್ಗಿಸುವ ಮಳೆ . ಹಗಲಿಡೀ ಮಬ್ಬುಗತ್ತಲೆ. ಮಧ್ಯಾಹ್ನವಾಗುತ್ತಲೇ ಸುರಿವ ಮಳೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆನ್ನುವಂತೆ , ಬೆಳೆದ ಬೆಳೆ ಎಲ್ಲವೂ ಮಳೆಯಲ್ಲಿ ಕರಗಿಹೋಗುತ್ತಿದೆ. ಮುಗ್ಗಲು ವಾಸನೆ ಎಲ್ಲೆಲ್ಲೂ ತುಂಬಿಕೊಂಡಿದೆ. ಹೊರಗಿನ ಮಬ್ಬುಗತ್ತಲೆ ನಮ್ಮ ಮನಸ್ಸನ್ನೂ ಆವರಿಸಿಕೊಂಡಿದೆ. 


ಓದು ಮಾತ್ರ ಎಲ್ಲವನ್ನೂ ಮರೆಯಿಸುವ ಶಕ್ತಿಯನ್ನು ಪಡೆದುಕೊಂಡಿದೆ ಎಂದೆನಿಸುತ್ತದೆ. ಕುಗ್ಗಿದ ಮನಸ್ಸನ್ನು ಸ್ವಲ್ಪವಾದರೂ ಚೇತೋಹಾರಿಯಾಗಿಸುತ್ತದೆ. ಪ್ರತಿನಿತ್ಯ ಮನೆಗೆ ಬರುವ ಆರು ದಿನಪತ್ರಿಕೆಗಳು ಮನಸ್ಸನ್ನು ಮುದುಡಿಸುತ್ತವೆ. ಒಂದಾದರೂ ಒಳ್ಳೆಯ ಸುದ್ದಿಯಿಲ್ಲದೇ ಕೇವಲ ರಾಜಕೀಯ ಹಗರಣಗಳಿಂದ ಕೂಡಿ ನಾವು ಎಂತಹ ದಿನಗಳಲ್ಲಿ ಬದುಕುತ್ತಿದ್ದೇವೆ. ಇದನ್ನು ಬದಲಾಯಿಸುವುದಾದರೂ ಹೇಗೆ ಎನ್ನುವುದೇ ಅರ್ಥವಾಗುತ್ತಿಲ್ಲ. 


ಬಹುಶಃ ಆಳುವವರು ಒಳ್ಳೆಯ ಪುಸ್ತಕಗಳನ್ನು ಓದದೇ ಇರುವುದರಿಂದ ಲೋಕದ ಪರಿಜ್ಞಾನವನ್ನು ಪಡೆದುಕೊಳ್ಳದೇ ಹೋದರು.ಸ್ವಾರ್ಥಿಗಳಾಗುತ್ತಾ ಹೋದರು. ಉಳಿದವರ ಬಗ್ಗೆ ಯೋಚಿಸದೇ ಕಲ್ಲುಮನಸ್ಸಿನವರಾಗಿ ಹೋದರು.  ಓದುವ ಹವ್ಯಾಸವಿರುವವರು ಬೇರೆಯವರ ಮನಸ್ಸನ್ನು . ಬದುಕನ್ನು ಅರ್ಥಮಾಡಿಕೊಳ್ಳಲು ಸಮರ್ಥರಿರುತ್ತಾರೆ. ಹಾಗಾಗಿಯೇ ನಾನು ನನ್ನ ವಿದ್ಯಾರ್ಥಿಗಳಿಗೆ ದಿನನಿತ್ಯ ಒಂದು ಮೂವತ್ತು ಪುಟಗಳನ್ನಾದರೂ ಓದುವ ಹವ್ಯಾಸವಿಟ್ಟುಕೊಳ್ಳಿ ಎಂದು ಹೇಳುತ್ತಿದ್ದೆ. ನಾನಂತೂ ಆ ಅಭ್ಯಾಸವನ್ನು ಇವತ್ತಿನವರೆಗೂ ಬಿಟ್ಟಿಲ್ಲ. 


ನಿವೃತ್ತನಾದರೂ ಸಮಯ ಕಳೆಯುವುದು ನನಗೆ ಸಮಸ್ಯೆಯಾಗಿಲ್ಲ. ಮನೆತುಂಬಾ ತುಂಬಿಕೊಂಡಿರುವ ಪುಸ್ತಕಗಳು ಮನಸ್ಸಿಗೆ ಖುಷಿಯನ್ನು ತಂದುಕೊಡುತ್ತಿವೆ. ಅವುಗಳ ಸಂಗದಲ್ಲಿ ಹೊತ್ತು ಹೋಗುತ್ತಿದೆ ನನಗೆ. ಓದುವುದರಲ್ಲಿಯೇ ಸಮಯದ ಪರಿಜ್ಞಾನವನ್ನು ಕಳೆದುಕೊಂಡ ನನ್ನನ್ನು ಹೊರಗೆ ಕವಿದ ಮಬ್ಬುಗತ್ತಲೆ ನಾಳಿನ ಬಗ್ಗೆ ಚಿಂತಿಸುವಂತೆ ಮಾಡುತ್ತಿವೆ. ನೆನೆದ ಪೈರನ್ನು ಉಳಿಸಲು ಹೆಣಗುತ್ತಿರುವ ರೈತನ ಬಗ್ಗೆ ಯೋಚಿಸುವಂತೆ ಮಾಡುತ್ತಿವೆ. ನಾಳೆ ಹೇಗೋ ಏನೋ ಎಂಬ ಭಯ ಕಾಡುತ್ತಿದೆ. ಮತ್ತೆ ಅಕಾಶ ತಿಳಿಯಾಗುವುದು ಯಾವಾಗ. ಮಳೆ ನಿಲ್ಲುವುದು ಯಾವಾಗ? ಒಂದೂ ಅರ್ಥವಾಗುತ್ತಿಲ್ಲ. 


ವಾರದ ಓದು" ಜೋಗಿಯವರ "ಜರಾಸಂಧ", ವಿಕಾಸ ಸ್ವರೂಪರ Q & A (slumdog millionaire) english ಕಾದಂಬರಿ ಓದಿದೆ. ಜತೆಗೆ ಡಿ.ಕೆ.ಚೌಟರ "ಮಿತ್ತಬೈಲು ಯಮುನಕ್ಕ" ಕಾದಂಬರಿಯನ್ನು ಮರುಓದಿದೆ. 

No comments:

Post a Comment