ತಕಿಟ ತಕಿಟ ಧೋಂ

Sunday, November 28, 2010

ಕಭಿ ಖುಷಿ ಕಭಿ ಗಂ

ಕಭಿ  ಖುಷಿ ಕಭಿ ಗಂ


ಕಳೆದ ವಾರದ ಏಳು ದಿನಗಳಲ್ಲಿ ಐದು ದಿನ ಸಂಜೆ ಮತ್ತೆ ಅದೇ ಮೋಡ ಮತ್ತು ಅದೇ ಮಳೆ. ಉಳಿದ ಎರಡು ದಿನಗಳಲ್ಲಿ ಸಂಜೆ ಕಾಣಿಸಿಕೊಂಡ ಬಿಸಿಲು ಮನಸ್ಸಿಗೆ ಎಷ್ಟು ಸಂತೋಷ ತಂದುಕೊಟ್ಟಿತು ಎಂದರೆ ದಿನಾ ಹೀಗೆ ಇರಬಾರದಾ ಎಂದೆನಿಸಿತು. ಮತ್ತೆ ನಾಳೆ ಹೇಗೋ ಏನೋ ಎಂಬ ಚಿಂತೆ ಕಾಡುತ್ತಿತ್ತು. ಅರ್ಥ ಮಾಡಿಕೊಳ್ಳಲಿಕ್ಕೂ ಸಾಧ್ಯವಿಲ್ಲದ ಹವಾಮಾನ ನಮ್ಮೆಲ್ಲರ ತಲೆಯನ್ನಂತೂ ತಿನ್ನುತ್ತಿದೆ. ಇಂತಹ ವಾತಾವರಣ ಮನಸ್ಸನ್ನು ಮುದುಡಿಸುತ್ತಿದೆ. ಖಿನ್ನತೆ ಆವರಿಸಿಕೊಳ್ಳುತ್ತಿದೆ. ಯಾವ ಕೆಲಸದಲ್ಲಿಯೂ ಉತ್ಸಾಹವಿರುವುದಿಲ್ಲ. ಬೆಳಿಗ್ಯೆ ಏಳುವಾಗಲೇ ಮೋಡ ತುಂಬಿದ ಆಕಾಶ ಕಂಡಾಗ ಯಾರಿಗಾದರೂ ಉತ್ಸಾಹ ಬರುವುದು ಹೇಗೆ?. ಮಳೆಗಾಲವಂತೂ ಅಲ್ಲ. ಈಗ ಯಾವತ್ತೂ ಮಳೆಗಾಲವೇ. ಪ್ರತಿದಿನದ ಪತ್ರಿಕೆಯಲ್ಲಿ ಹವಾಮಾನ ವರದಿ ನೋಡಿದಾಗ ಮತ್ತೆ ಮಳೆ ಬರುವ ಸಂಭವವುಂಟು ಎಂದು ತಿಳಿದಾಗ ಮತ್ತೆ ಮತ್ತೆ ಮನಸ್ಸು ಕುಸಿದುಹೋಗುತ್ತಿದೆ.


ಹೇಳಿ ಕೇಳಿ ನನ್ನೂರು ಅಂತಹ ದೊಡ್ಡ ಊರೇನೂ ಅಲ್ಲ. ಸಾಹಿತ್ಯಕ ಕಾರ್ಯಕ್ರಮಗಳಾಗಲೀ ಅಥವಾ ಬೇರೆ ಕಾರ್ಯಕ್ರಮಗಳು ನಡೆಯುವುದೇ ಕಷ್ಟದಲ್ಲಿ. ಸಾಂಸ್ಕೃತಿಕವಾಗಿ ಬಹಳ ಸಂಪನ್ನವಾಗಿರುವ ಊರು ಎಂದು ಒಂದು ಕಾಲದಲ್ಲಿ ಹೆಸರನ್ನು ಪಡೆದಿತ್ತು ನನ್ನೂರು. ಆದರೆ ಈಗ ಕಾಲ ಬದಲಾಗಿದೆ. ತಿಳಿದವರು, ಬುದ್ಧಿವಂತರು, ಓದುಗರು ಸೇರುವುದೇ ವಿರಳವಾಗಿ ಹೋಗಿದೆ. ಬೇರೆಯವರ ಮಾತುಗಳನ್ನು ಕೇಳುವ ಅವಕಾಶವನ್ನೇ ನಾವು ಕಳೆದುಕೊಂಡಿದ್ದೇವೆ. ಊರು ನಿಧಾನವಾಗಿ ಎಚ್ಚತ್ತುಕೊಳ್ಳುತ್ತದೆ ಮತ್ತು ರಾತ್ರಿ ಎಂಟುಗಂಟೆಯೆನ್ನುವಾಗ ನಿದ್ರಿಸಲು ಪ್ರಾರಂಭಿಸುತ್ತದೆ. ಧಾವಂತವಿಲ್ಲದ ನಡೆ ನನ್ನೂರಿನದು. ನಾವು ಹಾಗೇ ಆಗಿಬಿಟ್ಟಿದ್ದೇವೆ. ಒಂದು ಕಾಲದಲ್ಲಿ ಬೆಳ್ಳಂಬೆಳಗ್ಗೆ ಎದ್ದು ಚಟುವಟಿಕೆಯಿಂದ ಬದುಕು ನಡೆಸುತ್ತಿದ್ದ ನಾನು ಈಗ ಹೊಂದಿಕೊಂಡಿದ್ದೇನೆ ನನ್ನೂರಿಗೆ. ಗಂಟೆ ಐದೂವರೆ ಎನ್ನುವಾಗ ಬೆಳಗಾಗುತ್ತದೆ. ಹಾಲು ಮತ್ತು ಪೇಪರ್ ತೆಗೆದುಕೊಂಡು ಬಂದರೆ ದಿನದ ವ್ಯವಹಾರ ಮುಗಿದ ಹಾಗೆ. ಮೊದಲಿನ ಪುಟದಿಂದ ಕೊನೆಯ ಪುಟದವರೆಗೆ ಎಲ್ಲಾ ಆರು ಪತ್ರಿಕೆಗಳನ್ನು ಓದುವುದರಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ಬೇರೆ ಯಾವುದೇ ಹೇಳಿಕೊಳ್ಳುವ ಕೆಲಸವಿಲ್ಲದೇ ಇದ್ದುದರಿಂದ ಅದರಲ್ಲಿಯೇ ಸುಖ ಹುಡುಕುತ್ತಿದ್ದೇನೆ.ಇದರ ಜತೆಗೆ ಮತ್ತುಳಿದ ಪುಸ್ತಕಗಳಿವೆ. ಹೊಸತಾಗಿ ಬರುತ್ತಿರುವ ಪುಸ್ತಕಗಳನ್ನು ತರಿಸಿಕೊಂಡು ಓದುವುದು ಮತ್ತು ಅದನ್ನು ಬೇರೆಯವರಿಗೆ ಹೇಳಿ ಅದನ್ನು ಓದುವಂತೆ ಮಾಡುವ ಪ್ರಯತ್ನ ಮಾಡುತ್ತಿರುತ್ತೇನೆ.   


ಕಳೆದವಾರದ ಓದು:ಜೀವಧ್ವನಿ - ಸರ್ಜಾಶಂಕರ ಹರಳಿಮಠ. (೧೫೨ಪು) ಜೋಗಿಕಾಲಂ-ಜೋಗಿ(೨೧೬ಪು) ಕಾಸರಗೋಡಿನ ಸಣ್ಣಕತೆಗಳು (೩೫೩) ಮತ್ತು ಮರುಓದು ತೇಜಸ್ವಿಯವರ ಪಾಕಕ್ರಾಂತಿ (೮೯ಪು)

No comments:

Post a Comment