ತಕಿಟ ತಕಿಟ ಧೋಂ

Thursday, October 28, 2010

ಎಕ್ಲೊ ಚಲೋರೆ

ಎಕ್ಲೊ ಚಲೋರೆ




ಕವಿ ರವೀಂದ್ರನಾಥ ಠಾಗೋರರ ಪ್ರಸಿದ್ಧ ಹಾಡಿನ ಮೊದಲ ಸಾಲಿದು. ಪದ್ಯ ಪೂರ್ತಿ ಗೊತ್ತಿಲ್ಲದಿದ್ದರೂ ಈ ಸಾಲು ಮಾತ್ರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದು ಕೊಂಡು ಬಿಟ್ಟಿದೆ. ಏಕಾಂಗಿಯಾಗಿ ಹೋಗು. ಜತೆಯಲ್ಲಿ ಯಾರೂ ಇರುವುದಿಲ್ಲ ಎನ್ನುವ ಮಾತು ಸತ್ಯವೆನ್ನುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. 


ನಾಳಿದ್ದು ಭಾನುವಾರ ಮೂಡಬಿದ್ರೆಗೆ ನುಡಿಸಿರಿ ಕಾರ್ಯಕ್ರಮಕ್ಕೆ  ಹೋಗಬೇಕೆಂದು ನಿರ್ಧರಿಸಿದ್ದೇನೆ. ಸುಮ್ಮನೆ ಅಲ್ಲಿ ಪುಸ್ತಕದ ಅಂಗಡಿಗೆ ಹೋಗಿ ನೋಡಿ ಬರಬೇಕು ಎಂಬಾಸೆ. ಜತೆಯಲ್ಲಿ ಯಾರೂ ಬರಲು ಸಿದ್ಧರಿಲ್ಲ. ಅಡಕೆ ಕೊಯ್ಲು, ಮಳೆ ,ಕೆಲಸ, ಆತಂಕ ಅವರಿಗೆ ಕಾಡುತ್ತಿದೆ. ನನ್ನ ಸ್ವಾರ್ಥಕ್ಕೆ ಅವರಿಗೆ ತೊಂದರೆ ಕೊಡಲು ಬಯಸದೇ ನಾನೊಬ್ಬನೇ ಹೊರಟಿದ್ದೇನೆ. ಅಲ್ಲೂ ಗೆಳೆಯರು ಸಿಕ್ಕಬಹುದು. ಸಿಗದೇ ಹೋಗಬಹುದು. ಒಂಟಿಯಾಗಿ ತಿರುಗುವ ಸುಖವೇ ಬೇರೆಯಾಗಿರುತ್ತದೆ. ಭಾನುವಾರವನ್ನು ನಿರೀಕ್ಷಿಸುತ್ತಿದ್ದೇನೆ.  ಮೊನ್ನೆ ಗೆಳೆಯ ಮುರಲೀಧರ ಉಪಾಧ್ಯರು ಮಂಗಳೂರಿನಲ್ಲಿ ನಡೆಯುತ್ತಿರುವ ಪುಸ್ತಕಮೇಳದಲ್ಲಿ ತಿರುಗುತ್ತಿರುವಾಗ ನನ್ನ ನೆನಪಾಯಿತು ಎಂದು ಸಂದೇಶ ಕಳುಹಿಸಿದ್ದರು. ಅವರಿಗೆ ಏನೆಂದು ಉತ್ತರಿಸಬಹುದಿತ್ತು. ಸುಮ್ಮನೆ ಯೋಚಿಸುತ್ತಾ ಕುಳಿತೆ. ಹಳ್ಳಿಯಲ್ಲಿ ಬದುಕುವುದರಿಂದ ಕೆಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಮತ್ತೆ ಕೆಲವನ್ನು ಗಳಿಸುತ್ತೇವೆ. ಇಲ್ಲಿನ ಶಾಂತಿ, ನಿಧಾನಗತಿಯ ಬದುಕು ಅಲ್ಲಿ ಸಿಗಲು ಸಾಧ್ಯವಿಲ್ಲ. ಪುಸ್ತಕಮೇಳದಂತಹ ಮೇಳಗಳು ಇಲ್ಲಿ ನಡೆಯಲು ಸಾಧ್ಯವಿಲ್ಲ. ಇಲ್ಲಿ ಸರಿಯಾಗಿ ದಿನಪತ್ರಿಕೆಗಳೂ, ವಾರಪತ್ರಿಕೆಗಳೂ ಸಿಗುವುದಿಲ್ಲ. ಆದರೆ ಅವುಗಳ ಮೇಲಿದ್ದ ಮೋಹವನ್ನು ಬಿಟ್ಟುಬಿಟ್ಟಿದ್ದೇನೆ. ನಾನೂ ಈಗ ಪಕ್ಕಾ ಹಳ್ಳಿಗನಾಗಿದ್ದೇನೆ. 


ನಾನಾಗಿಯೇ ಆರಿಸಿಕೊಂಡ ಬದುಕು ಇದು. ಹಾಗಾಗಿ ಬೇರೆ ಯಾವ ಬೇಸರವೂ ಮನಸ್ಸಿನಲ್ಲಿ ಬೇರೂರದಂತೆ ಇದ್ದುದರಲ್ಲಿಯೇ ಉಳಿದ ಪಯಣವನ್ನು ಸಾಗಿಸಬೇಕು. ಏಕ್ಲೋ ಚಲೋರೆ. 


ಕಳೆದವಾರ ಹೆಚ್ಚಿನದನ್ನು ಓದಲಾಗಲಿಲ್ಲ. ಕಂಪ್ಯೂಟರ್ ನಲ್ಲಿ ಸಮಸ್ಯೆ ಬಂದಿತ್ತು. ಒಬ್ಬನೇ ಕುಳಿತು ಏನೇನೋ ಪ್ರಯೋಗ ಮಾಡಿ ಸರಿಮಾಡಿಕೊಂಡಿದ್ದೇನೆ. ನನ್ನ ಸಂಗ್ರಹದಲ್ಲಿದ್ದ ಸುಮಾರು ಮೂರುವರೆಸಾವಿರ ಸಂಗೀತದ ಫೈಲ್‍ಗಳು ನಾಪತ್ತೆಯಾಗಿದ್ದವು. ಅವುಗಳನ್ನು ಮತ್ತೆ ಸ್ಥಾಪಿಸಿಕೊಳ್ಳುವುದರಲ್ಲಿಯೇ ವಾರದ ನಾಲ್ಕುದಿನಗಳು ಕರಗಿದವು. ಈ ವಾರ  ಸಲ್ಮಾನ್ ರಶ್ದೀಯ Haroun and the sea of stories ಪುಸ್ತಕ ಮಾತ್ರ ಓದಲು ಸಾಧ್ಯವಾಯಿತು. ಈಗ ಕುಶವಂತ್ ಸಿಂಗ್‍ರವರ obsolute kushawant ಓದುತ್ತಿದ್ದೇನೆ.  

No comments:

Post a Comment