ತಕಿಟ ತಕಿಟ ಧೋಂ

Wednesday, November 3, 2010

ಸಂತೆಯಲ್ಲಿ ನಿಂತ ಸಂತ.


ಕಳೆದ ವಾರ ಯೋಚಿಸಿದಂತೆ ಮೂಡಬಿದ್ರೆಯ ನುಡಿಸಿರಿಗೆ ಹೋಗಿದ್ದೆ. ದಾರಿಯುದ್ದಕ್ಕೂ ಮೋಡ, ಮಳೆಯ ವಾತಾವರಣ. ಘಟ್ಟ ಇಳಿದು ದಕ್ಷಿಣ ಕನ್ನಡ ಜಿಲ್ಲೆಗೆ ಕಾಲಿಡುತ್ತಿದ್ದಂತೆ ಸ್ವಲ್ಪ ಬಿಸಿಲು ಕಾಣಿಸಿಕೊಂಡಿತು. ಮೂಡಬಿದ್ರೆ ಹಿತವಾದ ಬಿಸಿಲಿನಿಂದ, ಜನರ ಓಡಾಟದಿಂದ ತುಂಬಿಕೊಂಡಿತ್ತು. ಚಿತ್ರ ಕಲಾ ಪ್ರದರ್ಶನ ನೋಡಿ ಮತ್ತೆ ಪುಸ್ತಕದಂಗಡಿಗೆ ನುಗ್ಗಿದೆ. ಎಲ್ಲಿಹೋದರೂ ಜನ ಜನ ಜನ.ಶಾಲಾ  ಮಕ್ಕಳು ಪ್ರತಿ ಮಳಿಗೆಯಲ್ಲಿ ತುಂಬಿಕೊಂಡಿದ್ದರು. ನನ್ನಲ್ಲಿ ಇಲ್ಲದ ಪುಸ್ತಕಗಳನ್ನು ಹುಡುಕುವುದೇ ಕಷ್ಟವಾಯಿತು. ಆಕೃತಿಯ ಮಳಿಗೆಯಲ್ಲಿ ಸಮಗ್ರ ಕುಂವೀ ಸಿಕ್ಕಾಗ ಸಂಭ್ರಮಗೊಂಡಿದ್ದೆ. ಇನ್ನು ಒಂದು ತಿಂಗಳು ಯೋಚನೆಯಿಲ್ಲ. ಏಕೆಂದರೆ ಸುಮಾರು ಸಾವಿರ ಪುಟಗಳಿಷ್ಟಿರುವ ಪುಸ್ತಕ ಒಂದು ತಿಂಗಳ ಓದಿಗೆ ಸಾಕಾಗುತ್ತದೆ. 


ಎಲ್ಲಾ ಮಳಿಗೆಯಲ್ಲೂ ಒಂದೇ ರೀತಿಯ ಪುಸ್ತಕಗಳಿದ್ದವು. ವಿಶ್ವೇಶ್ವರ ಭಟ್‍ರ ಪುಸ್ತಕಗಳು, ಛಂದ ಪ್ರಕಾಶನದ ಪುಸ್ತಕಗಳು ಹೆಚ್ಚಾಗಿ ಎಲ್ಲಾ ಮಳಿಗೆಯಲ್ಲೂ ಕಾಣಿಸಿಕೊಂಡಿದ್ದವು. ಮಂಗಳೂರಿನಲ್ಲಿ ನಡೆದ ಪುಸ್ತಕಮೇಳದಲ್ಲಿ ವ್ಯಾಪಾರವೇ ಇರಲಿಲ್ಲವಂತೆ. ಇಲ್ಲಿ ನುಡಿಸಿರಿಯಲ್ಲಿ ಚೆನ್ನಾಗಿಯೇ ವ್ಯಾಪಾರ ಆಗಿರಬೇಕು. 


ಮತ್ತೆ ಹೊರಗೆ ಬಂದ ನಾನು ಯಾರಿಗೂ ಕಾಣಿಸಿಕೊಳ್ಳದಂತೆ ಅಡಗಿಕೊಳ್ಳುವುದರಲ್ಲಿಯೇ ಮಗ್ನನಾದೆ. ಗುರುತಿನವರು ಯಾರಾದರೂ ಸಿಕ್ಕರೆ ಮತ್ತೆ ಮಾತು ಮಾತು ಮಾತು . ನನಗಿದು ಬೇಕಿರಲಿಲ್ಲ. ನಾನು ಹೋದದ್ದೇ ಸಂತೆಯಲ್ಲಿ ನಿಂತ ಸಂತನಂತೆ ಇರಲು. ಗದ್ದಲದ ನಡುವೆಯೂ ನಾನು ನಾನಾಗಿರಲು . ಕೊನೆಗೂ ಅಲ್ಲಿಯೇ ಇದ್ದು ಇಲ್ಲದವನಂತೆ ಇರಲು ನನ್ನಿಂದ ಸಾಧ್ಯವಾಯಿತು. 


ಒಂದು ರೀತಿಯ ಸಂಕೋಚ , ಮುಜುಗರ ಕಾಡುತ್ತಿರುತ್ತದೆ. ನಾಲ್ಕು ಜನರ ನಡುವೆ ಕಾಣಿಸಿಕೊಳ್ಳಲು ಹಿಂಜರಿಕೆಯಾಗುತ್ತದೆ. ನಿವೃತ್ತನಾದ ಕಾರಣದಿಂದಲೋ ಏನೋ. ಎಲ್ಲಿಯೂ ಕಾಣಿಸಿಕೊಳ್ಳಲು ಆಸೆಯಾಗುವುದಿಲ್ಲ. ನನ್ನ ಸುತ್ತ ಇರುವ ಜನರಿಗೆಲ್ಲಾ ತಾವು ಏನಾದರೂ ಮಾಡಿ ಎಲ್ಲಿರ ಕಣ್ಣಿಗೂ ಕಾಣಿಸಿಕೊಳ್ಳುವಂತಿರಬೇಕು ಎಂಬ ಹಪಹಪಿಕೆ ಇದ್ದಂತೆ ಕಾಣುತ್ತದೆ. ಅಂತಹವರಿಗೆ ಚಲಾವಣೆಯಲ್ಲಿರುವ ಪ್ರತಿಷ್ಠಿತರ ಹಿಂದೆ ಮುಂದೆ ಇರಲು ಅವರು ಬಯಸುತ್ತಾರೆ ಶಿವಾಯ್ ನಮ್ಮಂತಹವರು, ಒಂದು ಕಾಲದಲ್ಲಿ ಆತ್ಮೀಯರು ಆಗಿದ್ದ ನಾವು ಕಾಣುವುದಿಲ್ಲ. ನಾನೂ ಅದಕ್ಕೆ ಈಗ ಹೊಂದಿಕೊಂಡಿದ್ದೇನೆ. ಅವರಿಗೂ ಮುಜಗರವಾಗದಂತೆ ಸೈಡ್‍ವಿಂಗ್‍ಗೆ ತೆರಳಿದ್ದೇನೆ. 


ಕಳೆದವಾರದ ಓದು:
                                              ಖುಶವಂತ್ ಸಿಂಗ್‍ನ obslute kushawant ಓದಿದೆ. ಕೇವಲ ೧೮೬ ಪುಟಗಳಷ್ಟಿರುವ ಪುಸ್ತಕ ಮುಗಿಸಲು ವಾರವೇ ಬೇಕಾಯ್ತು. ನಡನಡುವೆ ಏನೇನೋ ಕೆಲಸಗಳು. ಈಗ ಕುಂವೀ ಸಮಗ್ರ ಕೈಗೆತ್ತಿಕೊಂಡಿದ್ದೇನೆ. ಇನ್ನು ಈ ತಿಂಗಳು ಚಿಂತಿಲ್ಲ.    

1 comment:

  1. ತಂದೆ ಐನ್ಸ್ಟೈನ್ ಕುರಿತು ಸದಾ ಬಳಸುತ್ತಿದ್ದ ಉದ್ಧರಣೆ ನೆನಪಾಗುತ್ತದೆ. ಅದರ ಅಕ್ಷರಕ್ಷರ ನನ್ನಲ್ಲಿಲ್ಲ. ಆದರೆ ಸದಾ ಭಕ್ತಜನ ಪರಿವೇಷ್ಟಿತ ಐನ್ಸ್ಟೈನ್ ಮಾನಸಿಕವಾಗಿ ‘ಏಕಾಕಿ ಆದರೆ ಏಕಾಂಗಿಯಲ್ಲ’ ಎಂಬರ್ಥದಲ್ಲೇನೋ ದಾಖಲಿಸಿದ್ದಾರೆ.
    ಅಶೋಕವರ್ಧನ

    ReplyDelete